ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐಎಂಎ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅಧಿಕಾರಿಗಳು ಹಾಗೂ ನೌಕರರು ಸೇರಿದಂತೆ ಜಿಲ್ಲೆಯ ಅರಣ್ಯ ಇಲಾಖೆಯ 80 ಮಂದಿಯ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಹೃದ್ರೋಗ ತಜ್ಞ ಡಾ. ಶ್ರೀಕಾಂತ ರೆಡ್ಡಿ, ಚರ್ಮರೋಗ ತಜ್ಞ ಡಾ. ವಿನಯಕುಮಾರ ಬಿಯಾನಿ, ಕೀಲು ರೋಗ ತಜ್ಞ ಡಾ. ರಘು ಕೃಷ್ಣಮೂರ್ತಿ, ಡಾ. ಲೋಕೇಶ ಹಿರೇಮಠ ಹಾಗೂ ಕಿವಿ, ಮೂಗು ಹಾಗೂ ಗಂಟಲು ತಜ್ಞ ಡಾ. ಸುಮಂತ್ ಕಣಜಿಕರ್ ಆರೋಗ್ಯ ತಪಾಸಣೆ ಮಾಡಿದರು.
ಇಸಿಜಿ, ರಕ್ತ ಪರೀಕ್ಷೆ, ತಪಾಸಣೆ ನಡೆಸಿ, ಔಷಧಿ, ಡೆಂಟಲ್ ಕಿಟ್ ಉಚಿತವಾಗಿ ವಿತರಿಸಲಾಯಿತು.
ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಅರಣ್ಯದ ಪಾತ್ರ ಬಹಳ ಮಹತ್ವದ್ದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯ ಉಳಿಸಿ, ಬೆಳೆಸಲು ಶ್ರಮಿಸುತ್ತಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.
ಮನೋರೋಗ ತಜ್ಞ ಡಾ. ಅಭಿಜೀತ್ ಪಾಟೀಲ ಹಾಗೂ ಡಾ. ನಾಗೇಶ ಪಾಟೀಲ ಮಾತನಾಡಿದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಶಿವಕುಮಾರ ಗಜರೆ, ವಿ.ಡಿ. ರಾಜೇಂದ್ರ, ರೋಟರಿ ಕಲ್ಯಾಣ ಝೋನ್ ನಿಕಟಪೂರ್ವ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಸದಸ್ಯ ಸೂರ್ಯಕಾಂತ ರಾಮಶೆಟ್ಟಿ, ವಲಯ ಅರಣ್ಯ ಅಧಿಕಾರಿಗಳಾದ ಮಹೇಂದ್ರ ಮೋರೆ, ಶಿವಕುಮಾರ ರಾಠೋಡ್ ಇದ್ದರು.