ಹುಮನಾಬಾದ್: ‘ರೈತರು ಕೃಷಿ, ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಕೃಷಿ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ಬೀದರ್ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿನಿ ಅನುಷಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ಈಚೆಗೆ ನಡೆದ ‘ಗ್ರಾಮೀಣ ತೋಟಗಾರಿಕೆ ಕಾರ್ಯನುಭವ ಶಿಬಿರ’ದಲ್ಲಿ ಅವರು ಮಾತನಾಡಿದರು.
ಬೀದರ್ ತೋಟಗಾರಿಕೆ ಕಾಲೇಜಿನ ಕಾರ್ಯನುಭವ ಶಿಬಿರಾರ್ಥಿಗಳಿಗೆ ದುಬಗುಂಡಿ ಗ್ರಾಮದ ರೈತರು ಉತ್ತಮ ಸಹಕಾರ ನೀಡಿದ್ದಾರೆ. ರೈತರು ತೋಟಗಾರಿಕೆ ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೂಂಡು ಉತ್ತಮ ಇಳುವರಿ ಪಡೆಯಬೇಕು ಎಂದು ತಿಳಿಸಿದರು.
ಬೀದರ್ ತೋಟಗಾರಿಕೆ ಕಾಲೇಜಿನ ಪ್ರಾಧ್ಯಾಪಕ ವಿ.ಪಿ.ಸಿಂಗ್ ಮಾತನಾಡಿ,‘ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ತೋಟಗಾರಿಕೆ ಹಾಗೂ ಕೃಷಿ ಯೋಜನೆಗಳ ಲಾಭ ಪಡೆಯಬೇಕು’ ಎಂದರು.
ಹಿರಿಯ ಮುಖಂಡ ಶಿವರಾಜ ಗಂಗಶಟ್ಟಿ ಮಾತನಾಡಿ,‘ಆಧುನಿಕ ಯುಗದಲ್ಲಿ ರೈತರು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಮಾಹಿತಿ ಪಡೆದು, ಸಸಿ ನೆಟ್ಟು ಉತ್ತಮ ಇಳುವರಿ ಪಡೆಯುವುದರೊಂದಿಗೆ ಮಾದರಿ ರೈತರಾಗಬೇಕು’ ಎಂದರು.
ಬೀದರ್ ತೋಟಗಾರಿಕೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಬಗೆಯ ಸಸಿಗಳನ್ನು ಪ್ರದರ್ಶಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರ ಪಸಾರ್ಗಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕಕುಮಾರ ಚಳಕಾಪುರ, ಮಲ್ಲಪ್ಪ ಕಾಶಪ್ಪನೋರ, ರೈತರಾದ ಕಂಟೆಪ್ಪ ಆಣದೂರೆ, ಶಂಕರ ಪಸಾರ್ಗಿ, ಮುಕಿಂದ ಭೋಜಗುಂಡಿ, ನಾಗರಾಜ ನಿಂಬೂರೆ ಹಾಗೂ ರಾಜಕುಮಾರ ಬೆಳಕೇರಿ ಇದ್ದರು.