ಬೀದರ್: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್ ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿರುವ ಉಪ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಗೊತ್ತುಪಡಿಸಲಾಗಿದೆ. ಹೊಲೆಯ ಸಮುದಾಯಕ್ಕೆ ಶೇ 5 ರಷ್ಟು ಹಾಗೂ ಮಾದಿಗ ಸಮುದಾಯಕ್ಕೆ ಶೇಕಡ 6 ರಷ್ಟು, ಇನ್ನುಳಿದ ಜಾತಿಗಳಿಗೆ ನ್ಯಾಯಯುತವಾಗಿ ಅವರವರ ಜಾತಿಯ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳು ಮೀಸಲಾತಿಯನ್ನು ಅಧಿಕ ಪ್ರಮಾಣದಲ್ಲಿ ಕಬಳಿಸುತ್ತಿವೆ. ಅಸ್ಪೃಶ್ಯರಿಗೆ ದಕ್ಕಬೇಕಿದ್ದ ಯೋಜನೆಗಳನ್ನು ಕಬಳಿಸಿವೆ. ರಾಜಕೀಯ ಅಧಿಕಾರವನ್ನೂ ಕಿತ್ತುಕೊಂಡಿವೆ. ಆಯೋಗದ ವರದಿ ಜಾರಿಗೆ ಬಂದರೆ ಎಲ್ಲ ಜಾತಿಗಳಿಗೆ ನ್ಯಾಯ ದೊರಕಲಿದೆ ಎಂದು ತಿಳಿಸಿದ್ದಾರೆ.
ಆಯೋಗದ ವರದಿ ಜಾರಿ ಮಾಡಲು ಹಿಂದೇಟು ಹಾಕಿದರೆ ಅಸ್ಪೃಶ್ಯರಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಗ್ರಾಮ ಮಟ್ಟದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.