ಕಮಲನಗರ: ತಾಲ್ಲೂಕಿನ ಸಂಗಮ ಗ್ರಾಮ ಹತ್ತಿರ ಹರಿದುಬರುವ ಮಾಂಜ್ರಾ ನದಿಗೆ ಒಳಹರಿವು ಹೆಚ್ಚಳವಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕಮಲನಗರ ಭಾಗದಲ್ಲಿ ದೇವನದಿ ನಾಲಾ 4 ಫೀಟ್ ನೀರು ಹೆಚ್ಚಾಗಿ ಹರಿದು ಬಂದು ಮಾಂಜ್ರಾ ನದಿಗೆ ಸೇರಿದೆ. ಈಗಾಗಲೇ ನದಿಗಳಲ್ಲಿ ಕಾರಾಂಜಾ, ನಾರಾಂಜಾ ಮತ್ತು ಮಾಂಜ್ರಾ ಮೂರು ನದಿಗಳ ಸಂಗಮದಲ್ಲಿ ಒಳಹರಿವು ಹೆಚ್ಚಳಗೊಂಡು ಸುತ್ತಲಿನ ಹೊಲಗಳಿಗೆ ನುಗ್ಗುವ ಮೊದಲೇ ಅಲ್ಲಲ್ಲಿ ನಿರ್ಮಿಸಲಾದ ಬಿಡ್ಜ್ ಕಂ ಬ್ಯಾರೇಜ್ ಗೇಟ್ ಸಕಾಲಕ್ಕೆ ತೆಗೆದ ಪರಿಣಾಮ ಯಾವುದೇ ಹಾನಿಯಾಗಿಲ್ಲ’ ಎಂದು ಹೇಳಿದ್ದಾರೆ.
ಸಕಾಲಕ್ಕೆ ಮಳೆಯಾಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈಗಾಗಲೇ ಭೂಮಿಯನ್ನು ಹದಮಾಡಿಕೊಂಡಿದ್ದು, ಸೋಯಾಬೀನ್, ತೊಗರಿ, ಉದ್ದು, ಹೆಸರು, ಜೋಳ ಬಿತ್ತನೆ ಕಾರ್ಯಕ್ಕೆ ಬೀಜ ಹಾಗೂ ಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ.