ಬೀದರ್: ‘ಶ್ರಾವಣ ಮಾಸದಲ್ಲಿ ಶರಣ ಸಂತರ ತತ್ವ, ಉಪದೇಶ ಆಲಿಸಿ ಬದುಕು ರೂಪಿಸಿಕೊಳ್ಳಬೇಕು’ ಎಂದು ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ಹೇಳಿದರು.
ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶ್ರಾವಣ ಪ್ರಯುಕ್ತ ಆರಂಭವಾದ ಬಸವ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಲಿಂಗ ಸ್ವಾಮೀಜಿ ಆರ್ಶೀವಚನ ನೀಡಿ, ‘ಶರಣರ ವಚನಗಳು ಸುಂದರ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು. ‘ಶರಣರು ಶ್ರಾವಣದಲ್ಲಿ ಶರಣರ, ಸಂತರ ಅನುಭಾವಗಳನ್ನು ಕೇಳಲು ಸಂಸಾರ ಬಂಧನದಿಂದ ಹೊರಬಂದು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.
ಉದ್ಯಮಿ ಜೈರಾಜ್ ಖಂಡ್ರೆ ಹಾಗೂ ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ.ಬಿರಾದಾರ ಮಾತನಾಡಿದರು.
ಪ್ರವಚನ ಸಮಿತಿಯ ಅಧ್ಯಕ್ಷ ನೀಲಕಂಠ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಿ.ಸಂಗಪ್ಪ, ವೈಜಿನಾಥ ಬಿರಾದಾರ, ಶ್ರೀಕಾಂತ ಬಿರಾದಾರ, ಚಂದ್ರಶೇಖರ ಹೆಬ್ಬಾಳೆ, ರಾಜಶೇಖರ ಮಠ ಇದ್ದರು.
ಇಂದುಮತಿ ನೀಲಕಂಠ ಬಿರಾದಾರ ಅವರು ಬಸವಣ್ಣ ಹಾಗೂ ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಜೀವಕುಮಾರ ಸ್ವಾಮಿ, ವಚನಶ್ರೀ ಹಾಗೂ ಚನ್ನಬಸಪ್ಪ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು.