ಬಸವಕಲ್ಯಾಣ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಕೈಗೊಂಡಿರುವ ನಿಯಮಗಳಿಗೆ ಇಲ್ಲಿ ಶುಕ್ರವಾರವೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಖ್ಯ ಮಾರುಕಟ್ಟೆ ಒಳಗೊಂಡು ಎಲ್ಲೆಡೆಯ ಅಂಗಡಿಗಳು ಬಂದ್ ಇದ್ದವು.
ಬೆಳಿಗ್ಗೆ 10 ಗಂಟೆಯವರೆಗೆ ಕಿರಾಣಿ, ಮೆಡಿಕಲ್ ಒಳಗೊಂಡು ಅಗತ್ಯ ವಸ್ತುಗಳ ಅಂಗಡಿಗಳಷ್ಟೇ ತೆರೆದಿದ್ದವು. ಹೋಟಲ್ಗಳಲ್ಲಿ ಊಟ, ಉಪಾಹಾರದ ಪಾರ್ಸೆಲ್ ನೀಡಲಾಯಿತು. ಆದರೂ ಸಣ್ಣಪುಟ್ಟ ಚಹಾ ಅಂಗಡಿಗಳು, ಪಾನ್ಬೀಡಾ ಡಬ್ಬಾಗಳು ಮಾತ್ರ ಸಂಪೂರ್ಣ ಬಂದ್ ಇದ್ದವು.
ಬಸ್ ಹಾಗೂ ಇತರೆ ವಾಹನಗಳ ಸಂಚಾರ ನಿಷೇಧಿಸಿದ ಕಾರಣ ಅಗತ್ಯ ಇದ್ದವರು ಮಾತ್ರ ವಾಹನ ತೆಗೆದುಕೊಂಡು ಹೋದರು. ಹೀಗಾಗಿ ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಮುಖ್ಯ ರಸ್ತೆ ಹಾಗೂ ಇತರೆ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.