ಬೀದರ್: ರಾಜಕೀಯ ಪಕ್ಷಗಳು ವಿವಿಧೆಡೆ ಅದ್ದೂರಿ ಮೆರವಣಿಗೆ ಮಾಡುತ್ತಿರುವ ಕಾರಣ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನ ಕೋವಿಡ್ ಲೆಕ್ಕಿಸದೆ ಶುಕ್ರವಾರ ಮೊಹರಂ ಪೀರ್ಗಳ ಮೆರವಣಿಗೆ ಅದ್ದೂರಿಯಾಗಿ ನಡೆಸಿದರು.
ನಗರದ ಓಲ್ಡ್ಸಿಟಿಯ ಸಿದ್ದಿತಾಲೀಂ ಹಾಗೂ ಮನಿಯಾರ್ ತಾಲೀಂನಲ್ಲಿ ಪೀರ್ಗಳ ಸಾಂಕೇತಿಕ ಮೆರವಣಿಗೆ ನಡೆಸುವ ಮೂಲಕ ವಿಸರ್ಜನೆ ಮಾಡಿದರು. ಬೀದರ್ ತಾಲ್ಲೂಕಿನ ಮರಕಲ್ನಲ್ಲಿ ಪೀರ್ಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಔರಾದ್ ತಾಲ್ಲೂಕಿನ ಬೋರಗಿಯಲ್ಲಿ ರಾತ್ರಿ ಪೀರ್ದೇವರ ಮುಂದೆ ಯುವಕರು ಹೆಜ್ಜೆ ಕುಣಿತ ಹಾಗೂ ಲೇಜಿಮ್ ಕುಣಿತ ಪ್ರದರ್ಶಿಸಿದರು. ಅಗ್ನಿಕುಂಡ ನಿರ್ಮಿಸಿ ದೇವರ ಪ್ರತಿಕೃತಿಯನ್ನು ಎತ್ತಿಕೊಂಡು ಪ್ರದಕ್ಷಿಣೆ ಹಾಕಿದರು. ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳದಲ್ಲಿ ಹೆಜ್ಜೆ ಕುಣಿತ ಪ್ರದರ್ಶಿಸಿದರು.
ರಾತ್ರಿಯಿಡೀ ಜಾಗರಣೆ ಮಾಡಿ ಮೊಹರಂ ಪದಗಳನ್ನು ಹಾಡಿದರು. ಹಿಂದೂ– ಮುಸ್ಲಿಮರು ಭಾವೈಕ್ಯದಿಂದ ಹಬ್ಬ ಆಚರಣೆ ಮಾಡಿದರು. ನೃತ್ಯ ಹಾಗೂ ಮೊಹರಂ ಪದ ಕೇಳಲು ಮಹಿಳೆಯರು, ಮಕ್ಕಳು ನೆರೆದಿದ್ದರು.
ಬೀದರ್ನ ಹಕ್ ಕಾಲೊನಿಯಲ್ಲಿ ಇರಾನಿ ಸಮುದಾಯದವರು ದೇವರ ಪ್ರತಿಕೃತಿ ಎದುರಲ್ಲಿ ಅರೆ ಬೆತ್ತಲೆಯಾಗಿ ದೇವರಲ್ಲಿ ಪ್ರಾರ್ಥಿಸಿ ದೇಹ ದಂಡಿಸಿಕೊಂಡರು. ಕಪ್ಪು ಬಟ್ಟೆ ಧರಿಸಿ ಶೋಕಾಚರಣೆ ಮಾಡಿದರು