ಚಿಟಗುಪ್ಪ: ‘ಜಾತಿ, ಮತ ಎನ್ನದೆ ಎಲ್ಲರೂ ಸಮಾನವಾಗಿ ಬದುಕುವ ಹಕ್ಕು ಪಡೆದಿದ್ದಾರೆ ಎಂಬ ಸಂದೇಶ ರಾಷ್ಟ್ರೀಯ ಸಹೋದರತ್ವ ದಿನಾಚರಣೆ ಮೂಲಕ ಸಾರಲಾಗುತ್ತಿದೆ’ ಎಂದು ಚನ್ನಮಲ್ಲೇಶ್ವರ ತ್ಯಾಗಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಇಟಗಾದ ಮುಕ್ತಿಮಠದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಸಹೋದರತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರು.
ವೈಮನಸ್ಸು, ಜಾತಿ ನಿಂದನೆ, ಹೊಟ್ಟೆ ಕಿಚ್ಚು, ಅಸೂಯೆ ಹಾಗೂ ಇತರ ಕೆಟ್ಟ ವಿಚಾರಗಳಿಂದ ಹೊರಬಂದು ವಿಶ್ವವೇ ನನ್ನ ಕಟುಂಬ, ಎಲ್ಲರಲ್ಲೂ ಭಗವಂತನ ವಾಸವಿದೆ ಎಂದು ಅರಿತು ಪರಸ್ಪರ ಸೌಹಾರ್ದಯುತವಾಗಿ ಬದುಕುವ ಕಲೆ ಕಲಿಯಬೇಕು. ಅಂದಾಗ ಮಾತ್ರ ನಮ್ಮ ಬದುಕು ಹಸನಾಗುತ್ತದೆ ಎಂದರು.
ಮುಕ್ತಿಮಠದ ಕಾರ್ಯದರ್ಶಿ ನೀಲಕಂಠ ಇಸ್ಲಾಮಪುರ್ ಮಾತನಾಡಿ,‘ಪರರ ನೋವನ್ನೂ ತನ್ನ ನೋವಾಗಿ ಕಾಣಬೇಕು. ಹಾಗೆಯೇ ಅವರ ಸಂತೋಷವೂ ತನ್ನ ಸಂತೋಷವೆಂದು ಭಾವಿಸಬೇಕು. ಸಕಲ ಜೀವಿಗಳ ಕಲ್ಯಾಣವೇ ಮನುಜ ಮತದ ಕಲ್ಯಾಣ’ ಎಂದರು.
ರಾಷ್ಟ್ರೀಯ ಸಹೋದರತ್ವ ದಿನದ ನಿಮಿತ್ತ ಭಕ್ತರಿಗೆ ಸಾಮೂಹಿಕ ಪ್ರಸಾದ ವಿತರಿಸುವ ವ್ಯವಸ್ಥೆ ಮಠದಿಂದ ಕಲ್ಪಿಸಲಾಗಿತ್ತು.
ಮುಕ್ತಿಮಠದ ಅಧ್ಯಕ್ಷ ಇಂದ್ರಣ್ಣ ಮೈಲೂರ್, ಕಂಠಯ್ಯ ಸ್ವಾಮಿ, ಶಿವಕುಮಾರ್ ಹಾಗೂ ಮಠದ ಭಕ್ತರು ಇದ್ದರು.