ಬೀದರ್: ಜಿಲ್ಲಾ ಆಡಳಿತವು ನಗರದ ಹೊರವಲಯದ 19 ಕಿ.ಮೀ. ಉದ್ದದ ರಿಂಗ್ ರಸ್ತೆ ವಿಭಜಕದಲ್ಲಿ ಅಲಂಕಾರಿಕ ಹೂವಿನ ಸಸಿಗಳನ್ನು ನೆಟ್ಟು ಸೌಂದರ್ಯೀಕರಣಗೊಳಿಸುವ ಯೋಜನೆಗೆ ಚಾಲನೆ ನೀಡಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಭಜಕದ ಮಧ್ಯೆ ಬೆಳೆದ ಮುಳ್ಳು ಕಂಟಿ ತೆರವುಗೊಳಿಸುವ ಅಭಿಯಾನವನ್ನೂ ಆರಂಭಿಸಿದೆ.
ಮೊದಲ ಹಂತದಲ್ಲಿ ದೇವ ದೇವ ವನದಿಂದ ಚಿಕ್ಕಪೇಟೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯಲ್ಲಿ ಆಕಾಶ ಮಲ್ಲಿಗೆ, ಸಿಲ್ವರ್ ಓಕ್, ಟೆಕೊಮಾ ಮೊದಲಾದ ಆಕರ್ಷಕ ಸಸಿಗಳನ್ನು ನೆಡುತ್ತಿದೆ. ಸಂಘ ಸಂಸ್ಥೆಗಳ ಸ್ವಯಂ ಸೇವಕರ ಶ್ರಮದಾನದ ನೆರವಿನಿಂದ ವಿಭಜಕದಲ್ಲಿ ಬೆಳೆದ ಮುಳ್ಳು ಕಂಟಿ ಹಾಗೂ ಇತರ ಗಿಡಗಳನ್ನು ತೆರವುಗೊಳಿಸುತ್ತಿದೆ.
ವಿಭಜಕದಲ್ಲಿನ ಕಳೆ ತೆಗೆದು ಸಸಿ ನೆಟ್ಟು ಶ್ರಮದಾನ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು, ಪ್ರತಿ ಭಾನುವಾರ ಬೆಳಿಗ್ಗೆ 7 ರಿಂದ 10 ರ ವರೆಗೆ ಶ್ರಮದಾನ ನಡೆಯಲಿದೆ. ಹೆಚ್ಚಿನ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಭಾಗಿಯಾಗಿ ಬೀದರ್ ಅನ್ನು ಸುಂದರ ಬೀದರ್ ಮಾಡಲು ಕೈಜೋಡಿಸಬೇಕು ಎಂದು ಹೇಳಿದರು.
ಅಭಿಯಾನದಲ್ಲಿ ಭಾಗಿಯಾಗಿ ಸಸಿ ನೆಟ್ಟ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು, ಜಿಲ್ಲಾ ಆಡಳಿತದ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ನಗರಸಭೆ ಎಇಇ ರಾಜಶೇಖರ ಮಠ, ವಲಯ ಅರಣ್ಯಾಧಿಕಾರಿ ಶಿವಕುಮಾರ ರಾಠೋಡ್, ಜಿ.ಎನ್. ಫೌಂಡೇಶನ್, ಟೀಮ್ ಯುವಾ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ಬೀದರ್ ಯುಥ್ ಎಂಪಾವರ್ಮೆಂಟ್ ಅಸೋಸಿಯೇಶನ್ ಸೇರಿ ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಭಾಗವಹಿಸಿದ್ದರು.