ಬೀದರ್: ‘ಆದಾಯ ಹೊಂದಿರುವ ವ್ಯಕ್ತಿಗಳು ಸಕಾಲದಲ್ಲಿ ತೆರಿಗೆ ಪಾವತಿ ಮಾಡಬೇಕು. ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಸಹಾಯಕ ಆಯುಕ್ತ ಆರ್.ಪದ್ಮಾಕರ್ ಕುಲಕರ್ಣಿ ಮನವಿ ಮಾಡಿದರು.
ನಗರದ ಕರ್ನಾಟಕ ಪದವಿ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ‘ಭಾರತದ ತೆರಿಗೆ ಪದ್ಧತಿ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಆದಾಯ ಹೆಚ್ಚಿದಂತೆ ಜನರು ಹೆಚ್ಚು ಖರ್ಚು ಮಾಡುತ್ತಾರೆ. ಆದಾಯ ಗಳಿಕೆಯಲ್ಲಿ ಪಾರದರ್ಶಕತೆ ಇದ್ದರೆ ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಾರೆ. ಪಾರದರ್ಶಕತೆ ಇಲ್ಲದಿದ್ದರೆ ಲೆಕ್ಕ ಪರಿಶೋಧಕರ ಮೂಲಕ ತೆರಿಗೆದಾರರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಎಂದು ಹೇಳಿದರು.
‘ಏಕರೂಪ ತೆರಿಗೆ ಪದ್ಧತಿಯಿಂದ ಸರ್ಕಾರಕ್ಕೆ ಸರಿಯಾಗಿ ತೆರಿಗೆ ಪಾವತಿಯಾಗುತ್ತದೆ. ಜಿಎಸ್ಟಿ ಜಾರಿಗೆ ಬಂದ ನಂತರ ₹ 2 ಸಾವಿರ ಕೋಟಿ ರಾಜ್ಯ ಸರ್ಕಾರಕ್ಕೆ ತೆರಿಗೆ ಬರುತ್ತಿದೆ. ಕೇಂದ್ರ ಸರ್ಕಾರಕ್ಕೆ ಬರುವ ತೆರಿಗೆ ಪ್ರಮಾಣ ₹ 85 ಸಾವಿರ ಕೋಟಿಯಿಂದ ₹ 1 ಲಕ್ಷ ಕೋಟಿಗೆ ಏರಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ರಾ.ಶಿ.ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಜಿ.ಪಾಟೀಲ ಮಾತನಾಡಿ, ‘ಸ್ವಯಂ ಪ್ರೇರಣೆಯಿಂದ ತೆರಿಗೆ ಪಾವತಿಸುವ ಮನೋಭಾವ ಜನರಲ್ಲಿ ಬರಬೇಕು’ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಶಶಿಧರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಡಳಿತ ಮಂಡಳಿ ಸದಸ್ಯರಾದ ಡಿ.ವಿ.ಸಿಂದೋಲ್, ವೀರಭದ್ರಪ್ಪ ಭುಯ್ಯ, ಸೂರ್ಯಕಾಂತ ಶೆಟಕಾರ, ನಿವೃತ್ತ ಪ್ರಾಚಾರ್ಯ ಡಾ.ಎಸ್.ವಿ.ಜೂಜಾ, ಡಾ.ಕಲ್ಪನಾ ದೇಶಪಾಂಡೆ, ಡಾ.ಸುರೇಶ ಮಾಶೆಟ್ಟಿ ಇದ್ದರು.
ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಪಾಟೀಲ ಸ್ವಾಗತಿಸಿದರು. ಡಾ.ರವೀಂದ್ರ ರೆಡ್ಡಿ ನಿರೂಪಿಸಿದರು. ಸುದರ್ಶಿನಿ ಚಾಕೂರೆ ವಂದಿಸಿದರು.