ಔರಾದ್: ‘ಕೋವಿಡ್ ನಿಯಮ ಪಾಲನೆಯೊಂದಿಗೆ ಇಲ್ಲಿಯ ಅಮರೇಶ್ವರ ಜಾತ್ರೆ ಯಶಸ್ವಿಯಾಗಿಸಲ ಭಕ್ತರು ಸಹಕರಿಸಬೇಕು’ ಎಂದು ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಮನವಿ ಮಾಡಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮತನಾಡಿದ ಅವರು, ‘ಜಾತ್ರೆ ಆಚರಣೆಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಾಗು ತ್ತಿವೆ. ಈ ಕುರಿತು ಜಿಲ್ಲಾಡಳಿತ ಗಡಿ ಭಾಗದಲ್ಲಿ ತಪಾಸಣೆ ನಡೆಸುತ್ತಿದೆ. ಜಾತ್ರೆ ಆಚರಣೆ ವೇಳೆ ಸಾರ್ವಜನಿಕರು ತಮ್ಮ ಸುರಕ್ಷತೆ ಕಡೆಗೂ ಗಮನ ಹರಿಸಬೇಕು. ಈ ವಿಷಯದಲ್ಲಿ ತಾಲ್ಲೂಕು ಆಡಳಿತ ಮತ್ತು ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.
‘ರೂಢಿಯಂತೆ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ. ಅನಗತ್ಯ ವೆಚ್ಚ ಮಾಡುವುದು ಬೇಡ. ಜಾತ್ರೆ ಮುಗಿದ ಕೂಡಲೇ ಸ್ಥಳೀಯ ಮುಖಂಡರ ಸಭೆ ಕರೆದು ದೇವಸ್ಥಾನದ ಮಹಾದ್ವಾರ ಸೇರಿದಂತೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ’ ಅವರು ಹೇಳಿದರು.
‘ಜಾತ್ರೆ ವೇಳೆ ಬೀದಿದೀಪ ಹಾಗೂ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಈ ಕುರಿತು ತಾವು ಮಾಡಿದ ಮಾಹಿತಿ ಚಿತ್ರ ಸಮೇತ ತಮ್ಮ ವಾಟ್ಸ್ಆ್ಯಪ್ಗೆ ಕಳುಹಿಸಲು’ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಅವರಿಗೆ ಸೂಚಿಸಿದರು.
‘ಈ ಅಮರೇಶ್ವರ ದೇವಸ್ಥಾನದಲ್ಲಿ ಐದು ದಶಕದ ಹಿಂದಿನಿಂದಲೂ ದಾಸೋಹ ವ್ಯವಸ್ಥೆ ಇದೆ. ಆದರೆ ಕಳೆದ ಕೆಲ ದಿನಗಳಿಂದ ನಿಂತು ಹೋಗಿದೆ. ಅದನ್ನು ಮತ್ತೆ ಜಾರಿಗೆ ತರಬೇಕು. ದೇವಸ್ಥಾನದ ಜಮೀನು ರಕ್ಷಣೆ ಮಾಡುವಂತೆ ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷಿರಿ, ಬಸವರಾಜ ಚಾರೆ ಸಲಹೆ ನೀಡಿದರು.
‘ದೇವಸ್ಥಾನದಲ್ಲಿ ಕಳ್ಳರ ಕಾಟ ಇದೆ. ರಾತ್ರಿ ಬರುವ ಭಕ್ತರಿಗೆ ಭದ್ರತೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ’ ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ಘುಳೆ, ಕಾಯಕ ಯೋಗಿ ಟ್ರಸ್ಟ್ ಕಾರ್ಯದರ್ಶಿ ಅನೀಲ ಜಿರೋಬೆ ಉಪ ವಿಭಾಗಾಧಿಕಾರಿ ಗಮನ ಸೆಳೆದರು.
ತಹಶೀಲ್ದಾರ್ ಎಂ. ಚಂದ್ರಶೇಖರ್, ಪಿಎಸ್ಐ ಜಗದೀಶ ನಾಯಕ್, ತಾ.ಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಧುರೀಣ ಶಿವರಾಜ ಅಲ್ಮಾಜೆ, ಸುಭಾಷ ನಿರ್ಮಳೆ, ರಾಜು ಯಡವೆ, ವೀರೇಶ ಅಲ್ಮಾಜೆ, ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಮಹಮ್ಮದ್ ನಯೀಮ್, ಎಪಿಎಂಸಿ ಕಾರ್ಯದರ್ಶಿ ಅಮಜತ್ಖಾನ್ ಇದ್ದರು.