ಬೀದರ್: ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸವಕಲ್ಯಾಣ ತಾಲ್ಲೂಕಿನ ಧನ್ನೂರ (ಆರ್) ಗ್ರಾಮದ ಹಳ್ಳದಲ್ಲಿ ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ.
ಮಲ್ಲಪ್ಪ ಶರಣಪ್ಪ ಕತೆಪನೋರ್ (25) ಮೃತ ಯುವಕ. ಸೋನವಾರ ರಾತ್ರಿ ಹಳ್ಳದಿಂದ ನಡೆದುಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.
ಸೋಮವಾರ ರಾತ್ರಿ ಎಂಟು ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ರಾತ್ರಿಯಿಡಿ ಸುರಿದಿದೆ. ಮಂಗಳವಾರವೂ ಮುಂದುವರೆದಿದೆ.
ಬೆಳಿಗ್ಗೆ ಶಾಲಾ, ಕಾಲೇಜು ಹಾಗೂ ದೈನಂದಿನ ಕೆಲಸಗಳಿಗೆ ಹೋಗುವವರು ಪರದಾಟ ನಡೆಸಬೇಕಾಯಿತು. ಜಿಲ್ಲೆಯಾದ್ಯಂತ 35.36 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ನಿರ್ಣಾ ಹೋಬಳಿಯಲ್ಲಿ ಅತಿ ಹೆಚ್ಚು 88 ಮಿ.ಮೀ ಮಳೆ ದಾಖಲಾಗಿದೆ.
ರೆಡ್ ಅಲರ್ಟ್:
ಮುಂದಿನ ಮೂರು ದಿನ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜುಲೈ 27ರಂದು 100 ಮಿ.ಮೀ.ಗೂ ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಸಲಹೆ ಮಾಡಿದೆ.