ಹುಮನಾಬಾದ್: ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ಹರಡುವ ಸಂಭವವಿದೆ ಎಂದು ಈಗಾಗಲೇ ಆರೋಗ್ಯ ತಜ್ಞರು ಸೂಚಿಸುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸೋಂಕಿನ ಪ್ರಮಾಣವನ್ನು ಹೆಚ್ಚಾಗದಂತೆ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಶಾಸಕ ರಾಜಶೇಖರ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ರಾಜ್ಯ ಘಟಕದ ಕಾರ್ಯದರ್ಶಿ ನವಿನ ಬತಲಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ಟೊಳ್ಳೆ ಮಾತನಾಡಿ, ‘ಕೋವಿಡ್ ಜಾಗೃತಿ ಅಭಿಯಾನವನ್ನು ಜಯ ಕರ್ನಾಟಕ ಜನಪರ ವೇದಿಕೆ ಪ್ರಾರಂಭಿಸಿದೆ. ಪಾಲಕರು ತಮ್ಮ ಮಕ್ಕಳನ್ನು ಸೋಂಕಿನಿಂದ ಕಾಪಾಡುವ ಸವಾಲು ಎದುರಾಗಿದೆ. ಸೋಂಕಿನ ಭಯವನ್ನು ಬಿಟ್ಟು ಜಾಗ್ರತೆಯಿಂದ ಇರುವುದು ಅನಿವಾರ್ಯ’ ಎಂದರು.
ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಕೋವಿಡ್ ಒಂದನೇ ಮತ್ತು ಎರಡನೇ ಅಲೆಯಲ್ಲಿ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಂದು ಗ್ರಾಮಕ್ಕೆ ಭೇಟಿ ಮಾಡಿ ಸಾರ್ವಜನಿಕರ ಆರೋಗ್ಯವನ್ನು ವಿಚಾರಿಸಿ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇನೆ. ತಜ್ಞರ ಪ್ರಕಾರ ಮತ್ತೆ ಕೋವಿಡ್ 3ನೇ ಅಲೆ ಬರುತ್ತದೆ ಎನ್ನುತ್ತಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಜನರಲ್ಲಿಯೂ ಸಹ ಜಾಗೃತಿ ಮೂಡಿಸುವ ಕಾರ್ಯ ಮಾಡೋಣ’ ಎಂದು ಹೇಳಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಅನೀಲ ತಾಳಮಡಗಿ, ತಾಲ್ಲೂಕು ಅಧ್ಯಕ್ಷ ಎಂ.ಡಿ. ರಫೀಕ್, ಉಪಾಧ್ಯಕ್ಷ ಅವಿನಾಶ ಧುಮಾಳೆ, ಪ್ರಮುಖರಾದ ಸೋಮು ಡಾಂಗೆ, ಕರಣ ಜಾನವೀರ, ಉಮೇಶ ಕಟ್ಟಿಮನಿ, ರಾಹುಲ ಬತಲಿ, ಅರುಣ ಇದ್ದರು.