ಬೀದರ್: ಕೊರೊನಾ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬೀದರ್-ಸಿಕಂದರಾಬಾದ್ ಹಾಗೂ ಬೀದರ್- ಕಲಬುರ್ಗಿ ರೈಲು ಸಂಚಾರ ಪುನರಾರಂಭಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್ ಆಗ್ರಹಿಸಿದ್ದಾರೆ.
ಸಿಕಂದರಾಬಾದ್ನ ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಅವರು ಈ ಕುರಿತು ಪತ್ರ ಬರೆದಿದ್ದಾರೆ.
ಕೊರೊನಾ ಮಹಾಮಾರಿಯ ಅಬ್ಬರದ ನಡುವೆಯೂ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯಲ್ಲಿ ಸಮತೋಲನ ಕಾಪಾಡಲು ಹಲವು ಕ್ಷೇತ್ರಗಳಲ್ಲಿ ಲಾಕ್ಡೌನ್ ಮಾರ್ಗಸೂಚಿಗಳನ್ನು ಸಡಿಲಿಸಿ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.
ಕೊರೊನಾದಿಂದಾಗಿ ತತ್ತರಿಸಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಪಾರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ಈ ಭಾಗದ ಜನ ವ್ಯಾಪಾರಕ್ಕೆ ಹಾಗೂ ಅದಕ್ಕೆ ಬೇಕಾಗಿರುವ ಸಾಮಗ್ರಿ ಹಾಗೂ ಕಚ್ಚಾ ವಸ್ತುಗಳ ಖರೀದಿಗೆ ಕಲಬುರ್ಗಿ ಹಾಗೂ ನೆರೆಯ ತೆಲಂಗಾಣದ ಹೈದರಾಬಾದ್ ನಗರಗಳನ್ನು ಅವಲಂಬಿಸಿದ್ದಾರೆ.
ಕಾರಣ, ನಷ್ಟದಲ್ಲಿರುವ ವ್ಯಾಪಾರ ವಹಿವಾಟಿಗೆ ಪುನಶ್ಚೇತನ ನೀಡುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಹೇಳಿದ್ದಾರೆ.