ಬೀದರ್: ‘ವಿಜಯಪುರದ ಸಂಸದ ರಮೇಶ ಜಿಗಜಿಗಣಿ ಅವರು ಕಾರ್ಯಕ್ರಮವೊಂದರಲ್ಲಿ ಬಂಜಾರ ಸಮಾಜದ ಮತಗಳು ಬೇಕಿಲ್ಲ ಎಂದು ಹೇಳಿರುವುದು ತೀವ್ರ ಖಂಡನಾರ್ಹ’ ಎಂದು ಗೋರ್ ಸಂಘಟನೆ ಅಧ್ಯಕ್ಷ ಉತ್ತಮ್ ಜಾಧವ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಒಂದು ಕಡೆ ಪ್ರಧಾನಿ ಮೋದಿಯವರು ಬಂಜಾರರನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೊಂದೆಡೆ ಅವರದೇ ಪಕ್ಷದ ಸಂಸದರೂ ಬಂಜಾರರ ಮತಗಳು ಬೇಡ ಎನ್ನುತ್ತಿದ್ದಾರೆ. ಈ ಧೋರಣೆ ಸರಿಯಲ್ಲ’ ಎಂದು ಖಂಡಿಸಿದರು.
‘ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಂಜಾರ ಸಮಾಜದವರಿಗೆ ಟಿಕೆಟ್ ನೀಡಿಲ್ಲ. ಇದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.
ಸಂಘಟನೆ ಜಿಲ್ಲಾ ಉಪಾಧ್ಯಕ್ಷ ನೀಲಕಂಠ ರಾಥೋಡ್, ಬೀದರ್ ತಾಲ್ಲೂಕು ಅಧ್ಯಕ್ಷ ವಿಕ್ರಂ ಪವಾರ್, ರಮೇಶ ರಾಥೋಡ್ ಹಾಜರಿದ್ದರು.