ಹುಮನಾಬಾದ್: ಹಿರಿಯ ಕಲಾವಿದರುಗಳಿಗೆ ಸರ್ಕಾರ ಆರ್ಥಿಕವಾಗಿ ನೆರವು ನೀಡಿ, ಪ್ರೋತ್ಸಾಹಿಸಬೇಕು ಎಂದು ಹಿರಿಯ ಸಾಹಿತಿ ಬಿ.ಎಸ್. ಖೂಬಾ ಅಭಿಪ್ರಾಯಪಟ್ಟರು. ವಿಶ್ವ ಕಲಾವಿದರ ದಿನಾಚರಣೆ ಅಂಗವಾಗಿ ಅಂತರರಾಜ್ಯ ಖ್ಯಾತಿಯ ಶ್ರೇಷ್ಟ ಕಲಾವಿದ ತಾಲ್ಲೂಕಿನ ಹುಡಗಿಯ ಬಸವರಾಜ ಮುಗಳಿ ದಂಪತಿಯನ್ನು ಅವರ ಸ್ವಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಸನ್ಮಾನಿಸಿ, ಮಾತನಾಡಿದರು.
ಇವರು ಬಿಡಿಸಿದ ಚಿತ್ರ ಕೇವಲ ಬೀದರ್ ಜಿಲ್ಲೆ, ಕರ್ನಾಟಕ ರಾಜ್ಯ ಮಾತ್ರ ಅಲ್ಲದೇ ಪಕ್ಕದ ಮಹಾರಾಷ್ಟ್ರ, ಆಂಧ್ರ ಮೊದಲಾದ ರಾಜ್ಯಗಳಲ್ಲೂ ನೋಡಲು ಸಿಗುತ್ತವೆ. ಗುಡಿ, ಗುಂಡಾರಗಳಲ್ಲಿ ಚಿತ್ರಗಳ ಕೆಳಗೆ ಮುಗಳಿ ಹೆಸರು ಕಂಡಾಗಲೊಮ್ಮೆ ಈ ಬಾಗದ ಸರ್ವರ ಕಣ್ಣೆದುರಿಗೆ ಬಸವರಾಜ ಮುಗಳಿ ಚಿತ್ರ ಮೂಡುವುದಲ್ಲದೇ ಅಭಿಮಾನ ಪುಟಿದೇಳುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರಕುಮಾರ ಭಂಡಾರಿ ತಿಳಿಸಿದರು.
ಅಂಥ ಮಹಾನ್ ಕಲಾವಿದರೊಬ್ಬರು ನಮ್ಮ ತಾಲ್ಲೂಕಿನವರೇ ಆಗಿರುವುದು ಅಭಿಮಾನದ ಸಂಗತಿ ಎಂದರು.
ಇವರ ಕಲೆ ಇಂದಿನ ಯುವ ಕಲಾವಿದರಿಗೆ ಮಾದರಿ ಎಂದು ಪರಿಷತ್ ಕೋಶಾಧ್ಯಕ್ಷ ಸ್ನೇಹಿ ಡಿ.ಎಂ.ಆರ್ಯ ನುಡಿದರು. ಕಾರ್ಯದರ್ಶಿ ಶಿವರಾಜ ಮೇತ್ರೆ, ಮಾರುತಿರಾವ ಪೂಜಾರಿ, ಸುಭಾಷ ಪಾಟೀಲ, ಜಾಕೀರ್, ಉದಯಕುಮಾರ, ಭೀಮಶಾ, ಚೆನ್ನಶೆಟ್ಟಿ ವಿಠ್ಠಲ್, ಸಚಿನ್ ಕನಕಟಕರ್ ಮೊದಲಾದವರು ಇದ್ದರು.