ಬೀದರ್: `ಕಮಲದ ಚಿಹ್ನೆಯ ಮೇಲೆ ಗೆದ್ದಿರುವ 118 ಮಂದಿ ಇದ್ದೇವೆ. ಹೀಗಾಗಿ, ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ನಾವು ಅವಧಿ ಪೂರೈಸುತ್ತೇವೆ. ಇಷ್ಟರ ಮೇಲೂ ಪ್ರತಿಪಕ್ಷಗಳಿಗೆ ಧೈರ್ಯವಿದ್ದರೆ ಅವಿಶ್ವಾಸ ನಿಲುವಳಿ ತರಲಿ' ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದ್ದಾರೆ.
ಕೆಜೆಪಿ ಜೊತೆಗೆ ಗುರುತಿಸಿಕೊಂಡಿರುವ ಶಾಸಕರ ವಿರುದ್ಧ ಕಿಡಿಕಾರಿದ ಅವರು, `ಈ ಶಾಸಕರು ಸುಮ್ಮನೆ ಕೆಜೆಪಿ ಜೊತೆಗೆ ಇದ್ದೇವೆ ಎಂದು ಹೇಳುವ ಬದಲು, ಆ ಬಗೆಗೆ ಸ್ಪೀಕರ್ ಅಥವಾ ಪಕ್ಷದ ಅಧ್ಯಕ್ಷರಿಗೆ ಲಿಖಿತವಾಗಿ ಪತ್ರ ನೀಡಲಿ' ಎಂದು ಸವಾಲು ಹಾಕಿದರು.
ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಿಶ್ವಾಸಮತ ಶಾಸನ ಸಭೆಯಲ್ಲಿ ಸಾಬೀತಾಗಬೇಕು. ಪ್ರತಿಪಕ್ಷಗಳು ಅಲ್ಲಿ ಏನೂ ಮಾಡಲಿಲ್ಲ. ಕನಿಷ್ಠ ಮಸೂದೆ ಮಂಡಿಸುವಾಗ ಅವಿಶ್ವಾಸ ತೋರಬಹುದಿತ್ತು. ಆದರೆ, ಪಲಾಯನ ಮಾಡಿದರು. ಹೀಗಾಗಿ ಪ್ರತಿಪಕ್ಷಗಳು ಕುಸ್ತಿ ಮಾಡದಿದ್ದರೆ ಅಖಾಡದಲ್ಲೇ ಮಾಡಬೇಕು' ಎಂದು ಟೀಕಿಸಿದರು.
ಪ್ರತಿಪಕ್ಷಗಳಿಗೆ ಧೈರ್ಯವೂ ಇಲ್ಲ; ಒಗ್ಗಟ್ಟೂ ಇಲ್ಲ. ಹೀಗಾಗಿ, ಅಧಿವೇಶನ ಮುಗಿದ ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇವರ ಉದ್ದೇಶಗಳು ಜನರಿಗೂ ಸರಿಯಾಗಿ ಅರ್ಥ ಆಗುತ್ತವೆ ಎಂದರು. ಕೆಲ ಶಾಸಕರು ಕೆಜೆಪಿ ಜೊತೆಗೆ ಹೋಗಲು ಬೇರೆ ಕಾರಣಗಳೂ ಇರಬಹುದು. ಪಕ್ಷದ ಶಿಸ್ತು ಸಮಿತಿ ಅದನ್ನು ಗಮನಿಸಲಿದೆ ಎಂದು ತಿಳಿಸಿದರು.