ಭಾಲ್ಕಿ: ಪಟ್ಟಣದ ಪ್ರವಾಸಿ ಮಂದಿರದ ಕಾಮಗಾರಿ ಇನ್ನೂ ಕುಂಟುತ್ತಲೇ ಸಾಗಿದೆ. ಹಳೆಯ ಪ್ರವಾಸಿ ಮಂದಿರದ ಹಿಂದೆ 36 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಕಾರ್ಯ ಆರಂಭಿಸಿ ಎಂಟು ವರ್ಷ ಕಳೆದಿವೆ.
ಹೊರಗಿನಿಂದ ಬರುವ ಅಧಿಕಾರಿಗಳು, ಸಚಿವರು, ಅತಿಥಿಗಳ ವಾಸ್ತವ್ಯದ ಉದ್ದೇಶಕ್ಕೆ ನೆರವಾಗಬೇಕಾದ ಪ್ರವಾಸಿ ಮಂದಿರ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಇದರ ಹಿಂಬದಿಯಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಚೇರಿಗಳು ಇವೆ. ಕಿಡಿಗೇಡಿಗಳು ಇಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎನ್ನುವುದು ಸುತ್ತಲ ನಿವಾಸಿಗಳ ಆರೋಪವಾಗಿದೆ.
ಕಾಮಗಾರಿ ಮುಗಿದಂತೆ ಕಾಣುತ್ತಿದ್ದರೂ ಒಳಭಾಗದ ಕೆಲಸಗಳು ಅಪೂರ್ಣವಾಗಿವೆ. ಪೀಠೋಪಕರಣ, ವಿದ್ಯುತ್ ಸಂಪರ್ಕದ ಕಾರ್ಯಗಳು ಮುಗಿದಿಲ್ಲ ಎನ್ನುವುದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ಸಬೂಬು.
`ಎಂಟು ವರ್ಷಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಪ್ರವಾಸಿ ಮಂದಿರದ ನಿರ್ಮಾಣಕ್ಕಾಗಿ ಹಣ ಮಂಜೂರಾಗಿತ್ತು.
ಇನ್ನೂ ಕಾಮಗಾರಿ ಮುಗಿಯದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ' ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಶೋಕ ಮಡ್ಡೆ, ಪುರಸಭೆ ಮಾಜಿ ಸದಸ್ಯ ದತ್ತಾತ್ರೇಯ ತೂಗಾಂವಕರ್ ಆರೋಪಿಸಿದ್ದಾರೆ.
`ಜವಾಬ್ದಾರಿ ಮರೆತಿರುವ ಅಧಿಕಾರಿಗಳ ನಿರ್ಲಕ್ಷಕ್ಕೆ ಪ್ರವಾಸಿ ಮಂದಿರ ಪೂರ್ಣಗೊಳ್ಳದೇ ಉಳಿದಿದೆ.
ಕೂಡಲೇ ಸಂಬಂಧಿಸಿದವರು ಗಮನ ಹರಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ. ಅಪೂರ್ಣ ಕಾಮಗಾರಿಗೆ ಕಾರಣವಾಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕಿದೆ' ಎಂದು ಒತ್ತಾಯಿಸಿದ್ದಾರೆ. `ಪ್ರವಾಸಿ ಮಂದಿರದ ಬಹುತೇಕ ಕೆಲಸ ಮುಗಿದಿದೆ. ಆದರೆ ಜೆಸ್ಕಾಂ ಪ್ರತ್ಯೇಕ ವಿದ್ಯುತ್ ಪರಿವರ್ತಕ (ಟಿ.ಸಿ.) ನೀಡಿಲ್ಲ' ಎಂದು ಲೋಕೋಪಯೋಗಿ ಜೂನಿಯರ್ ಎಂಜಿನಿಯರ್ ಮಾರುತಿ ರಾಠೋಡ ಪ್ರತಿಕ್ರಿಯಿಸಿದ್ದಾರೆ.