ಹುಮನಾಬಾದ್: ತಾಲ್ಲೂಕಿನ ಘಾಟ ಬೋರಾಳ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತೆ ಒತ್ತಾಯಿಸಿ, ಗ್ರಾಮ ಪ್ರಮುಖರು ರಾಜ್ಯ ಸಾರಿಗೆ ಹಾಗೂ ಗೃಹಖಾತೆ ಸಚಿವ ಆರ್. ಅಶೋಕ ಅವರಿಗೆ ಶಾಸಕ ರಾಜಶೇಖರ ಬಿ.ಪಾಟೀಲರ ಸಮ್ಮುಖದಲ್ಲಿ ಗುರುವಾರ ಮನವಿಪತ್ರ ಸಲ್ಲಿಸಿದರು.
ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ ಮತ್ತು ಬೀದರ್ ತಾಲ್ಲೂಕುಗಳಿಗೆ ನೇರ ಬಸ್ ಸಂಪರ್ಕ ಸೌಕರ್ಯ ಹೊಂದಿರುವ ಈ ಗ್ರಾಮ 20ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಬಸ್ ನಿರ್ಮಾಣಕ್ಕೆ ಬೇಕಾಗುವ 1ಎಕರೆ ಜಮೀನು ಗ್ರಾಮದ ಸರ್ವೆ ನಂಬರ್ 459ರ ಹೃದಯ ಭಾಗದಲ್ಲಿ ಮೀಸಲಾಗಿ ಇಡಲಾಗಿದೆ. ಇಲಾಖೆ ಶೀಘ್ರ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಸಲ್ಲಿಸಲಾದ ಮನವಿಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಸಚಿವ ಆರ್. ಅಶೋಕ ಶೀಘ್ರ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಪವಾರ, ಉಪಾಧ್ಯಕ್ಷ ಪ್ರಮೋದ ಮುಳೆ, ವೆಂಕಟರಾವ ಪಾಟೀಲ, ಎ.ಪಿ.ಎಂ.ಸಿ. ಉಪಾಧ್ಯಕ್ಷ ಶಿವಾಜಿರಾವ ಗಣೇಶ, ಗ್ರಾಮ ಪ್ರಮುಖರಾದ ರಾಜಕುಮಾರ ಪಾಟೀಲ, ಧೂಳಪ್ಪ ಸೇರಿಕಾರ, ವಿಠ್ಠಲರೆಡ್ಡಿ ಪೆಡ್ಡಿ, ನಾಗನಾಥ ಘಂಟೆ, ಅರವಿಂದ ಮಾನೆ, ಪ್ರಭು ಪಂಚಾಳ, ನರೋಬಾ ಗಣೇಶರಾವ, ಬಾಬು ರಾಠೋಡ, ಬಾಳು ಪಾಟೀಲ ಮನವಿಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.