ಬೀದರ್: ಇಲ್ಲಿಯ ಗುರುನಗರದಲ್ಲಿ ಇರುವ ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ಸಂಚಾಲಿತ ಡಾ. ಸಿ. ವಿಶ್ವಾಸ್ ಮೆಮೋರಿಯಲ್ ನರ್ಸಿಂಗ್ ಹೋಮ್ನಲ್ಲಿ ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಬಡ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 5 ಕೆ.ಜಿ.ಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.
ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ್ ಗ್ರಾಮದ 40 ವರ್ಷದ ಬಡ ಮಹಿಳೆ ಕಮಳಾಬಾಯಿ ಜ್ಞಾನೇಶ್ವರ್ ಶಸ್ತ್ರಚಿಕಿತ್ಸೆಗೊಳಗಾದವರು.
ಕೂಲಿ ಕೆಲಸ ಈ ಕುಟುಂಬಕ್ಕೆ ಆಧಾರವಾಗಿತ್ತು. ಕಳೆದ ಒಂದು ವರ್ಷದಿಂದ ಕಮಳಾಬಾಯಿ ಅವರ ಹೊಟ್ಟೆ ಗರ್ಭಿಣಿಯಂತೆ ಬೆಳೆಯತೊಡಗಿತ್ತು. ವಿವಿಧೆಡೆ ಅಲೆದಾಡಿದರೂ ಪ್ರಯೋಜನ ಆಗಿರಲಿಲ್ಲ. ಮಹಾರಾಷ್ಟ್ರದ ಉಮರ್ಗಾದಲ್ಲಿ ತೋರಿಸಿದಾಗ 20-30 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಲಾಗಿತ್ತು. ಬಳಿಕ ಅಲ್ಲಿಂದ ವಾಪಸ್ಸಾದ ಬಡ ಕುಟುಂಬ ಮೂರು ದಿನಗಳ ಹಿಂದೆ ತಮ್ಮ ನರ್ಸಿಂಗ್ ಹೋಂನದಲ್ಲಿ ದಾಖಲಾಗಿದ್ದು, ಬುಧವಾರ ಅರ್ಧ ಗಂಟೆ `ಓವರಿನ್ ಟ್ಯೂಮರ್' ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿದ್ದ 5 ಕೆ.ಜಿ. ಯ ಗಡ್ಡೆ ಹೊರ ತೆಗೆಯಲಾಗಿದೆ ಎಂದು ನರ್ಸಿಂಗ್ ಹೋಂ ಮುಖ್ಯಸ್ಥರು ತಿಳಿಸಿದ್ದಾರೆ.
ತಜ್ಞ ವೈದ್ಯ ಡಾ. ಭೀಮರಾವ್ ಸಿಂಗೋಡೆ ಹಾಗೂ ಅರವಳಿಕೆ ತಜ್ಞ ಡಾ. ಬಿರಾದಾರ್ ಅವರನ್ನು ಒಳಗೊಂಡ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಿದ್ದಾರೆ.