(ಮಸ್ಕಿ)ಲಿಂಗಸುಗೂರ: ನೈಸರ್ಗಿಕವಾಗಿ ಪರಿಸರದಲ್ಲಿ ದೊರಕುವ ವಸ್ತುಗಳ ಸದ್ಭಳಕೆ ಕ್ಷೀಣಿಸುತ್ತಿದೆ. ಹೀಗಾಗಿ ಮನುಷ್ಯಜೀವಿ ದಿನದಿಂದ ದಿನಕ್ಕೆ ಅನಾರೋಗ್ಯವನ್ನು ಆಹ್ವಾನಿಸುತ್ತಿದ್ದಾನೆ. ಪ್ರಕೃತಿ ಕೊಡಮಾಡಿದ ಹಣ್ಣು-ಹಂಪಲು, ತರಕಾರಿಗಳನ್ನು ಪದ್ಧತಿ ಅನುಸಾರ ಆಯಾ ಋತುಮಾನಕ್ಕೆ ತಕ್ಕಂತೆ ಬಳಸುವುದು ಸೂಕ್ತ.
ಮೇಲಿನ ಸಾತ್ವಿಕ ಆಹಾರ ಪದ್ಧತಿ ಮೈಗೂಡಿಸಿಕೊಂಡು ಅನಾರೋಗ್ಯವನ್ನು ದೂರ ಮಾಡಿಕೊಳ್ಳುವಂತೆ ಮನಗುಂಡಿಯ ಬಸವಾನಂದ ಸ್ವಾಮೀಜಿ ಸಲಹೆ ಮಾಡಿದರು.
ಈಚೆಗೆ ಪಟ್ಟಣದಲ್ಲಿ ಆಯೋಜಿಸಿದ್ದ ರೋಗದಿಂದ ಯೋಗದೆಡೆ ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆರೋಗ್ಯ ಶ್ರೀ ಬಿರುದು ಸ್ವೀಕರಿಸಿ ಮಾತನಾಡಿದ ಅವರು, ಬಾಯಿ ಚಪಲಕ್ಕಾಗಿ ಮನುಷ್ಯ ಜೀವಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ.
ನಿಸರ್ಗವು ಋತುಮಾನಕ್ಕೆ ತಕ್ಕಂತೆ ನೀಡುವ ಆಹಾರಗಳನ್ನು ಸ್ವೀಕರಿಸುವುದರಿಂದ ಸದೃಢ ಕಾಯ ಹೊಂದಬಹುದಾಗಿದೆ. ಹಣ್ಣುಗಳ ಸೇವನೆ, ನಿಯಮಿತ ಆಹಾರ ಪದ್ಧತಿ, ದೇವರ ಮೇಲಿನ ಭಕ್ತಿ ಕುರಿತಂತೆ ಸುಲಭ ನಿಯಮಗಳನ್ನು ಹೇಳಿಕೊಟ್ಟರು.
ಗಚ್ಚಿನಮಠದ ರುದ್ರದೇವರು ಆಶೀರ್ವಚನ ನೀಡಿದರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವಿರೇಶ ಸೌದ್ರಿ ಪ್ರಸ್ತಾವಿಕ ನುಡಿ ಸಲ್ಲಿಸಿದರು. ನಿವೃತ್ತ ನ್ಯಾಯಮೂರ್ತಿ ನಾಗರಾಜ ಅರಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾದೇವಪ್ಪಗೌಡ ಪಾಟೀಲ, ಮುಖಂಡರಾದ ಡಾ. ಶಿವಶರಣಪ್ಪ ಇತ್ಲಿ, ಪ್ರಕಾಶ ಧಾರಿವಾಲ, ಮಹಾಂತೇಶ ಮಸ್ಕಿ ಕಾರ್ಯಕ್ರಮ ನಿರೂಪಿಸಿದರು.