ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ ಗ್ರಾಮದ ಮಂಟೇಸ್ವಾಮಿ ದೇವಸ್ಥಾನದ ಸಮೀಪ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಶನಿವಾರ ವಿಸರ್ಜಿಸಲಾಯಿತು.
20ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾದ ಐದು ಅಡಿ ಎತ್ತರದ ಗಣಪತಿ ಮೂರ್ತಿಗೆ ಹೂವು, ಕಜ್ಜಾಯ, ವಡೆಯಿಂದ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಕಾಮಧೇನು, ಕುದುರೆ ವಾಹನ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಡೋಲು, ವಾದ್ಯದ ನಾದಕ್ಕೆ ವೀರಗಾಸೆ, ಗೊರವರ ಕುಣಿತ ನೆರೆದವರ ಕಣ್ಮನ ತಣಿಸಿದವು. ಮೆರವಣಿಗೆ ಸಾಗಿದ ಬೀದಿಗಳ ನಿವಾಸಿಗಳು ವಿನಾಯಕನಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ಮಕ್ಕಳು, ಯುವಕ ಯುವತಿಯರು ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು.