ಈ ಬಾರಿಯ ಚುನಾವಣೆಯಲ್ಲಿ ಬಿಎಸ್ಪಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊನೆಗಳಿಗೆಯಲ್ಲಿ ಬದಲಿ ಅಭ್ಯರ್ಥಿಯನ್ನು ಪಕ್ಷವು ಕಣಕ್ಕಿಳಿಸಿತ್ತು. ಪಕ್ಷದ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಅವರಿಗೆ 15,903 ಮತಗಳು ಮಾತ್ರ ಬಿದ್ದಿವೆ. 2019ರ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಎಂ.ಶಿವಕುಮಾರ್ ಅವರು 87,631 ಮತಗಳನ್ನು ಪಡೆದಿದ್ದರು.
ಠೇವಣಿ ಕಳೆದುಕೊಂಡ 12 ಅಭ್ಯರ್ಥಿಗಳು
ಕಣದಲ್ಲಿದ್ದ 14 ಅಭ್ಯರ್ಥಿಗಳಲ್ಲಿ 12 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಇರಿಸಲಾಗಿದ್ದ ಠೇವಣಿ ಅಭ್ಯರ್ಥಿಗಳಿಗೆ ವಾಪಸ್ ಸಿಗಬೇಕೆಂದಿದ್ದರೆ, ಒಟ್ಟು ಚಲಾವಣೆಯಾದ ಕ್ರಮಬದ್ಧ ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತಗಳನ್ನು ಅಭ್ಯರ್ಥಿಗಳು ಪಡೆಯಬೇಕು.
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 13,61,654 ಮತಗಳು ಕ್ರಮಬದ್ಧವಾಗಿದ್ದು, ಠೇವಣಿ ಉಳಿಯಬೇಕಾದರೆ ಅಭ್ಯರ್ಥಿಯೊಬ್ಬರು 2,26,943 ಮತಗಳನ್ನು ಪಡೆಯಬೇಕು. ಬೋಸ್ ಮತ್ತು ಬಾಲರಾಜ್ ಬಿಟ್ಟರೆ ಬೇರೆ ಯಾರೂ ಇದಕ್ಕಿಂತ ಹೆಚ್ಚು ಮತಗಳನ್ನು ಪಡೆದಿಲ್ಲ.
ಕಾಣದ ಕಾರ್ಯಕರ್ತರ ಸಂಭ್ರಮ
ಸುನಿಲ್ ಬೋಸ್ ಅವರು 1.88 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೂ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಕಾಣಲಿಲ್ಲ. ಸಾಮಾನ್ಯವಾಗಿ ಮತ ಎಣಿಕೆಯ ಸಂದರ್ಭದಲ್ಲಿ ಫಲಿತಾಂಶದ ನಿರೀಕ್ಷೆಯಲ್ಲಿ ನೂರಾರು ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ (ರಾಷ್ಟ್ರೀಯ ಹೆದ್ದಾರಿ) ನಿಂತಿರುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಬೋಸ್ ಗೆಲುವು ಖಚಿತವಾಗಿದ್ದರೂ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. 100 ಜನರಿಗಿಂತಲೂ ಕಡಿಮೆ ಇದ್ದರು. ಬೋಸ್ ಅವರು ಬರುವ ಹೊತ್ತಿಗೂ ಜಾಸ್ತಿ ಜನರು ಇರಲಿಲ್ಲ. ನಂತರ ಧಾರಾಕಾರ ಸುರಿದ ಮಳೆಯೂ ವಿಜಯೋತ್ಸವಕ್ಕೆ ಅಡ್ಡಿಪಡಿಸಿತು.
ಕಾಣದ ಅಭ್ಯರ್ಥಿಗಳು
ಕಾಂಗ್ರೆಸ್ನ ಸುನಿಲ್ ಬೋಸ್ ಮತ್ತು ಎನ್ಡಿಎ ಅಭ್ಯರ್ಥಿ ಎಸ್.ಬಾಲರಾಜ್ ಅವರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ. ಬೋಸ್ ಅವರು ಗೆಲುವು ಖಚಿತವಾದ ನಂತರ ಮೈಸೂರಿನಿಂದ ನಗರದತ್ತ ಹೊರಟರು. 4.30ರ ಬಳಿಕ ಮತ ಎಣಿಕೆ ಕೇಂದ್ರಕ್ಕೆ ಬಂದರು.