ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕ್ಯಾಶ್ (ನಗದು) ಕೌಂಟರ್ ಬಳಿಯಿಂದ ₹5 ಲಕ್ಷ ಹಣವನ್ನು ಕಳ್ಳತನ ಮಾಡಿರುವ ಪ್ರಕರಣ ಬುಧವಾರ ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ 11ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಯಾಂಕ್ ಸಿಬ್ಬಂದಿಯಂತೆ ಕೌಂಟರ್ನ ಹಿಂಭಾಗಕ್ಕೆ ತೆರಳಿರುವ ವ್ಯಕ್ತಿ, ಕ್ಯಾಶ್ ಕೌಂಟರ್ನ ಸಿಬ್ಬಂದಿ ಎಣಿಸಿ ಇಟ್ಟಿದ್ದ ನಗದಿನ ಕಟ್ಟನ್ನು ಕವರ್ಗೆ ತುಂಬಿಕೊಂಡು ನಂತರ ಹೊರ ಬರುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾಲ್ಕು ಜನರ ತಂಡ ಈ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ಬಳಿಕ ನಾಲ್ವರು ಬ್ಯಾಂಕ್ನಿಂದ ಹೊರಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಷಯ ತಿಳಿಯುತ್ತಲೇ, ನಗರ ಠಾಣೆ ಪೊಲೀಸರು ಬ್ಯಾಂಕ್ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಸ್ವಲ್ಪ ಲಕ್ಷ್ಯ ವಹಿಸಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
‘ಇಲ್ಲಿ ಭದ್ರತಾ ಲೋಪವಾದಂತೆ ಕಾಣಿಸುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬರು ಬ್ಯಾಂಕ್ ಕೌಂಟರ್ಗಳ ಬಳಿಗೆ ಹೋಗಲು ಸಾಧ್ಯ? ಸಿಬ್ಬಂದಿ ಗಮನಿಸಬೇಕಿತ್ತು’ ಎಂದು ಅವರು ಹೇಳಿದ್ದಾರೆ.
‘ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಲಾಗುತ್ತಿದ್ದು, ಕೂಲಂಕಷ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ನಗರ ಠಾಣೆ ಇನ್ಸ್ಪೆಕ್ಟರ್ ರಾಜೇಶ್ ತಿಳಿಸಿದರು.