ಚಾಮರಾಜನಗರ:ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಕಂಡ ಮಹಾನ್ ವ್ಯಕ್ತಿಗಳಾಗಿದ್ದು, ಇಬ್ಬರ ಜನ್ಮದಿನ ಒಂದೇ ಆಗಿರುವುದು ಭಾರತದ ಪಾಲಿಗೆ ಸುದಿನವಾಗಿದೆ’ ಎಂದುಭಾರತ್ ಜಿಲ್ಲಾ ಸೇವಾದಳ ಸಮಿತಿ ಅಧ್ಯಕ್ಷವೆಂಕಟನಾಗಪ್ಪಶೆಟ್ಟಿ (ಬಾಬು) ಭಾನುವಾರ ಹೇಳಿದರು.
ಸಮಿತಿಯ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ಗಾಂಧೀಜಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ದೇಶದ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದರು.
‘ಸರಳ ಸಜ್ಜನಿಕೆಯ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದರು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಕೂಗಿ ಇಡೀ ದೇಶವನ್ನು ಒಗ್ಗೂಡಿಸಿದರು. ಪ್ರಧಾನಿಯಾಗಿ ಪ್ರಾಮಾಣಿಕತೆಗೆ ಹೆಸರಾಗಿ ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿದ ಆದರ್ಶ ವ್ಯಕ್ತಿ’ ಎಂದರು.
ಸೇವಾದಳದ ಕೋಶಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ‘ಪ್ರತಿಯೊಬ್ಬರೂ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದರು.
ಸೇವಾದಳ ಜಿಲ್ಲಾ ಉಪಾಧ್ಯಕ್ಷ ವಿ.ಮಹದೇವಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸೀರೆ, ಬಟ್ಟೆ ವಿತರಿಸಲಾಯಿತು. ನಗರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಮಿತಿ ಸದಸ್ಯ ನಾಗೇಂದ್ರಪ್ರಸಾದ್, ಕೇಂದ್ರಸಮಿತಿ ಸದಸ್ಯ ಎನ್.ಜೋಸೆಫ್, ಜಿಲ್ಲಾ ಸಂಘಟಕ, ತಾಲ್ಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಮಹದೇವು, ವಲಯ ಸಂಘಟಕ ಕೆ. ಈರಯ್ಯ ಇದ್ದರು.