ಕೊಳ್ಳೇಗಾಲ: ‘ಶಾಸಕ ಎನ್.ಮಹೇಶ್ ಅವರಿಗೆ ಚಪ್ಪಲಿ ತೋರಿಸಿದರು ಎಂದು ಆರೋಪಿಸಿ ಪೊಲೀಸರು ಗ್ರಾಮದ ಸಿದ್ದರಾಜು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ’ ಎಂದು ದೂರಿ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮಸ್ಥರು ನಗರ ಠಾಣೆಯ ಮುಂದೆ ಶುಕ್ರವಾರ ಸಂಜೆ ದಿಢೀರನೆ ಪ್ರತಿಭಟಿಸಿದರು.
‘ಗ್ರಾಮದಲ್ಲಿ ಬೆಳಿಗ್ಗೆ ಕೊಂಡೋತ್ಸವದಲ್ಲಿ ಶಾಸಕ ಎನ್.ಮಹೇಶ್ ಭಾಗವಹಿಸಿದ್ದಾಗ ಸಿದ್ದರಾಜು, ಶಾಸಕರ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿ ಚಪ್ಪಲಿ ತೋರಿಸಿದ್ದರು’ ಎಂದು ಆರೋಪಿಸಲಾಗಿದೆ.
‘ಶಾಸಕರು ಸೂಚಿಸಿದ್ದರಿಂದಲೇ ಪೊಲೀಸರು ಥಳಿಸಿದ್ದಾರೆ’ ಎಂಬುದು ಗ್ರಾಮಸ್ಥರ ಆರೋಪ. ‘ನನಗೂ ಇದಕ್ಕೂ ಸಂಬಂಧ ಇಲ್ಲ. ಪೊಲೀಸರಿಗೆ ಸೂಚನೆಯನ್ನೂ ನೀಡಿಲ್ಲ. ದೂರು ದಾಖಲಾದ ನಂತರ ಪ್ರತಿಕ್ರಿಯಿಸುವೆ’ ಎಂದು ಶಾಸಕರು ಹೇಳಿದರು.
ಸಿದ್ದರಾಜು ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಶಾಸಕರನ್ನು ಟೀಕಿಸಿದ್ದೆ. ಆದರೆ ಚಪ್ಪಲಿ ತೋರಿಸಿದ್ದೇನೆ ಎಂಬುದು ಸುಳ್ಳು’ ಎಂದು ಸಿದ್ದರಾಜು ಹೇಳಿದರು.