ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಲು ಭಕ್ತರಿಗೆ ಅವಕಾಶ ಕಲ್ಪಿಸಿದ ಮೊದಲ ದಿನವೇ (ಭಾನುವಾರ) ಹಲವು ಭಕ್ತರು ಚಿನ್ನದ ತೇರು ಸೇರಿದಂತೆ ವಿವಿಧ ತೇರಿನ ಉತ್ಸವಗಳನ್ನು ನಡೆಸಿದ್ದು, ₹2.07 ಲಕ್ಷ ಆದಾಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದೆ.
ಭಾನುವಾರ ರಾತ್ರಿ 57 ಮಂದಿ ಚಿನ್ನದ ರಥೋತ್ಸವ ಸೇವೆಯನ್ನು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದರಿಂದಲೇ ₹1.71 ಲಕ್ಷ ಸಂಗ್ರಹವಾಗಿದೆ.
98 ಭಕ್ತರು ಹುಲಿವಾಹನ ಸೇವೆ (₹29,400), 21 ಮಂದಿ ಬಸವ ವಾಹನ ಸೇವೆ (₹6,300) ಹಾಗೂ ಇಬ್ಬರು ರುದ್ರಾಕ್ಷಿ ವಾಹನ (₹600) ಸೇವೆ ಮಾಡಿಸಿದ್ದಾರೆ.
556 ಭಕ್ತರಿಂದ ಮುಡಿಸೇವೆ: ಭಾನುವಾರ 556 ಭಕ್ತರು ಮಾದಪ್ಪನಿಗೆ ತಮ್ಮ ಮುಡಿಯನ್ನು ಅರ್ಪಿಸಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ₹27,800 ಆದಾಯ ಬಂದಿದೆ. 1.300 ಕೆಜಿಯಷ್ಟು ಉದ್ದನೆಯ ಕೂದಲು ಸಂಗ್ರಹವಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.