ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳದೆ ನಿಮಗೆ ಅರಣ್ಯವಾಸಿಗಳ ರೋದನ ಕಾಡಂಚಿನ ಗ್ರಾಮಗಳಿಗಿಲ್ಲ ಮೂಲಸೌಕರ್ಯ

ಮಹದೇಶ್ವರ ಬೆಟ್ಟ: ಕಾಡು, ಕಾಡಂಚಿನ ಗ್ರಾಮಗಳಿಗಿಲ್ಲ ಮೂಲಸೌಕರ್ಯಗಳು
Last Updated 12 ಡಿಸೆಂಬರ್ 2022, 5:07 IST
ಅಕ್ಷರ ಗಾತ್ರ

ಹನೂರು/ಮಹದೇಶ್ವರ ಬೆಟ್ಟ: ಮಳೆ ನೀರಿನಿಂದ ತುಂಬುವ ಕೆರೆಗಳ ನೀರೆ ಇಲ್ಲಿನ ಜನರಿಗೆ ಜೀವಜಲ. ಗ್ರಾಮದಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ ಅವರನ್ನು ಡೋಲಿಯಲ್ಲೇ ಹೊತ್ತೊಯ್ಯಬೇಕಾದ ಸ್ಥಿತಿ, ರಾತ್ರಿಯಾದರೆ ಸೌದೆಯ ಬೆಳಕಿನಿಂದ ಜೀವನ ಸವೆಸುವ ಜನರು, ಶಾಲೆಗಾಗಿ ದಟ್ಟಾರಣ್ಯದೊಳಗೆ ಕಿಲೋ ಮೀಟರ್ ಗಟ್ಟಲೇ ನಡೆದು ಹೋಗುವ ಮಕ್ಕಳು…

ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಸ್ಥಳ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನರ ಶೋಚನೀಯ ಬದುಕಿನ ಚಿತ್ರಣ ಇದು. ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನರ ಬದುಕು ಇಂದಿಗೂ ಇದೇ ರೀತಿಯಲ್ಲಿ ಸಾಗುತ್ತಿದೆ. ಬೇಡಗಂಪಣ ಹಾಗೂ ಸೋಲಿಗರೇ ಹೆಚ್ಚು ವಾಸ ಮಾಡುತ್ತಿರುವ ಈ ಗ್ರಾಮಗಳು ದಶಕಗಳಿಂದಲೂ ನಿರ್ಲಕ್ಷ್ಯಕ್ಕೊಳಗಾಗಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದರೂ, ಇಲ್ಲಿನ ಗ್ರಾಮಗಳಿಗೆ ಸೌಕರ್ಯಗಳಿಲ್ಲ. ಕನಿಷ್ಠ ಮೂಲಸೌಕರ್ಯ ಕಲ್ಪಿಸಿಕೊಡಿ ಎಂಬ ಇಲ್ಲಿನ ನಿವಾಸಿಗಳ ಕೂಗು, ಅರಣ್ಯ ರೋದನವಾಗಿದೆ.

ಗ್ರಾಮಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಮಹದೇಶ್ವರ ಬೆಟ್ಟದ ವ್ಯಾಪ್ತಿಗೆ ತುಳಸಿಕೆರೆ, ಇಂಡಿಗನತ್ತ, ಮೆಂದಾರೆ, ಮೆದಗನಾಣೆ, ಪಡಸಲನತ್ತ ತೋಕೆರೆ, ತೇಕಾಣೆ, ದೊಡ್ಡಾಣೆ ಸೇರಿದಂತೆ 20 ಗ್ರಾಮಗಳು ಬರುತ್ತವೆ. ಮಹದೇಶ್ವರ ಬೆಟ್ಟದ ಧಾರ್ಮಿಕ ಕೇಂದ್ರವಾಗಿರುವುದಿಂದ ಇಲ್ಲಿ ಸೌಲಭ್ಯಗಳಿವೆ. ಮಹದೇಶ್ವರ ಬೆಟ್ಟವನ್ನು ಬಿಟ್ಟು ಉಳಿದ 19 ಗ್ರಾಮಗಳಲ್ಲಿ 10,786 ಜನಸಂಖ್ಯೆ ಇದೆ. 2,719 ಕುಟುಂಬಗಳು ನೆಲೆಸಿವೆ.

10 ಗ್ರಾಮಗಳು ಕಾಡು ಒಳಗಡೆ ಇವೆ. ಆದರೆ, ಅರಣ್ಯದ ಒಳಗಡೆ ಇರುವ ಹಾಗೂ ಕಾಡಿನ ಅಂಚಿನಲ್ಲಿರುವ ಗ್ರಾಮ
ಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರತಿಯೊಂದು ಸೌಲಭ್ಯಕ್ಕೂ ಇಲ್ಲಿನ ಜನ ದಶಕಗಳಿಂದಲೂ
ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅರಣ್ಯದೊಳಗೆ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇವರಿಂದ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳೂ ಇವರನ್ನು ನಿರ್ಲಕ್ಷ್ಯಗೊಳಿಸಿರುವುದಕ್ಕೆ ಇಲ್ಲಿನ ಜನ ಹತಾಶೆಗೊಂಡು ಅಸಹನೀಯ ಬದುಕು ಸಾಗಿಸುತ್ತಿದ್ದಾರೆ.

‘ನಮಗೆ ರಸ್ತೆ, ವಿದ್ಯುತ್, ಆರೋಗ್ಯ,ಶಿಕ್ಷಣ ಮುಂತಾದ ಮೂಲಸೌಕರ್ಯವನ್ನಾದರೂ ಕಲ್ಪಿಸಿಕೊಡಿ ಎಂದು ಹಲವು ದಶಕಗಳಿಂದಲೂ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ಯಾವ ಜನಪ್ರತಿನಿಧಿ, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ವನ್ಯಧಾಮವಾಗಿರುವುದರಿಂದ ಅರಣ್ಯ ಅನುಮತಿ ನೀಡಿದರೆ ಸೌಲಭ್ಯ ಕಲ್ಪಿಸುವುದಾಗಿ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶವಾಗಿದ್ದ ಕಾಡು 2013ರಲ್ಲಿ ವನ್ಯಧಾಮವಾಗಿ ಘೋಷಣೆಯಾಯಿತು. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಅದಕ್ಕೂ ಮೊದಲೇ ನಮಗೆ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಮಾಡಬಹುದಿತ್ತು. ಚುನಾವಣೆ ಬಂದಾಗ ಮಾತ್ರ ಅಭಿವೃದ್ಧಿ ಮಂತ್ರ ಪಠಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗಳು

ಅರಣ್ಯದೊಳಗೆ ವಾಸಿಸುತ್ತಿರುವ ಮೆದಗನಾಣೆ, ಮೆಂದಾರೆ, ಇಂಡಿಗನತ್ತ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಿಸುತ್ತಿರುವ ಬಹುತೇಕ ಕುಟುಂಬಗಳು ಇಂದಿಗೂ ಪಡಿತರ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ.ಇರುವ ಕುಟುಂಬಗಳು ಪಡಿತರ ಪಡೆಯಲು ಕಿಲೋಮೀಟರ್ ಗಟ್ಟಲೇ ಬೇರೊಂದು ಗ್ರಾಮಕ್ಕೆ ಬಂದು ಪಡೆದು ಹೊತ್ತು ಸಾಗಬೇಕು. ಕೆಲವೊಂದು ಗ್ರಾಮಗಳಿಗೆ ಸಂಚಾರಿ ನ್ಯಾಯಬೆಲೆ ಅಂಗಡಿಗಳು ಬಂದರೂ ಸಮರ್ಪಕ ರೀತಿಯಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ದೊಡ್ಡಾಣೆ ಗ್ರಾಮದಲ್ಲಿ ಎರಡು ತಿಂಗಳಿಂದ ಪಡಿತರ ಅಕ್ಕಿ ಮಾತ್ರ ನೀಡುತ್ತಿದ್ದು, ರಾಗಿ ವಿತರಣೆಯಾಗಿಲ್ಲ.

ಇಲ್ಲಿನ ಗ್ರಾಮಗಳಲ್ಲಿ 1ರಿಂದ 5 ತರಗತಿವರೆಗೆ ಮಾತ್ರ ಶಾಲೆಗಳಿವೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಕ್ಕಳು ಮಹದೇಶ್ವರ ಬೆಟ್ಟಕ್ಕೆ ಬರಬೇಕು. ದಟ್ಟಾರಣ್ಯದಲ್ಲಿ 12 ಕಿ.ಮೀ ನಡೆದುಕೊಂಡೇ ಬರಬೇಕು. ಇಂಥ ಸಂದರ್ಭದಲ್ಲಿ ವನ್ಯಪ್ರಾಣಿಗಳು ದಾಳಿ ಮಾಡಿದರೆ ಅದಕ್ಕೆ ಯಾರು ಹೊಣೆ? ಹೀಗಾಗಿ ಪೋಷಕರು 5ನೇ ತರಗತಿಗಳಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಇದರಿಂದಾಗಿ ಈ ಭಾಗದ ಜನರಿಗೆ ಉನ್ನತ ಶಿಕ್ಷಣ ಕನಸಾಗಿಯೇ ಉಳಿದಿದೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಗ್ರಾಮಗಳಿಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಶಿಕ್ಷಣ, ಚಿಕಿತ್ಸಾ ಸೌಲಭ್ಯ ಕೊಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಇಲ್ಲಿನ ಜನರಿಗೆ ಯಾವ ಸೌಲಭ್ಯವೂ ಸಿಕ್ಕಿಲ್ಲ.

ಡೋಲಿಯಲ್ಲಿ ಸಾಗಿಸಬೇಕು: ಬೆಟ್ಟಗುಡ್ಡಗಳ ಮಧ್ಯೆ ವಾಸವಾಗಿರುವ ಇಲ್ಲಿನ ಜನರಿಗೆ ಆರೋಗ್ಯ ಸೇವೆ ಎಂಬುದು ಮರೀಚಿಕೆಯಾಗಿದೆ. ಮಧ್ಯರಾತ್ರಿಯಲ್ಲಿಅಥವಾ ತುರ್ತು ಸಂದರ್ಭದಲ್ಲಿ ಗರ್ಭಿಣಿಯರು, ಅನಾರೋಗ್ಯಕ್ಕೀಡಾದವರನ್ನು ಡೋಲಿಯಲ್ಲಿ ಕಟ್ಟಿಕೊಂಡು ಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ಸಾಗಿಸಬೇಕು. ಬೆಟ್ಟದಲ್ಲಿ ವೈದ್ಯರಿಲ್ಲದಿದ್ದರೆ ಕಾಮಗೆರೆ ಹೋಲಿಕ್ರಾಸ್ ಅಥವಾ ತಮಿಳುನಾಡಿನ ಮೆಟ್ಟೂರಿಗೆ ರೋಗಿಗಳನ್ನು ಕರೆದೊಯ್ಯಬೇಕು.

ಸಿ.ಎಂ. ಮೇಲೆ ನಿರೀಕ್ಷೆ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಹನೂರು ಹಾಗೂ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬರುತ್ತಿದ್ದು ಮುಂದಿನ ದಿನಗಳಲ್ಲಾದರೂ ಸಮಸ್ಯೆಗಳು ನಿವಾರಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ.

ಜನ-ವನ ಸೇತುವೆ ಸಾರಿಗೆ ಸ್ಥಗಿತ

ಮಲೆಮಹದೇಶ್ವರ ವನ್ಯದಾಮದೊಳಗೆ ವಾಸಿಸುತ್ತಿರುವ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಜನ-ವನ ಸೇತುವೆ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದ್ದವು. ಇದಕ್ಕಾಗಿ ₹56 ಲಕ್ಷ ಖರ್ಚು ಮಾಡಿ ನಾಲ್ಕು ವಾಹನಗಳನ್ನು ಖರೀದಿ ಮಾಡಲಾಗಿತ್ತು. ಪಡಿತರ ಸಾಗಣೆ, ಜನರ ಓಡಾಟಕ್ಕೆ, ತುರ್ತು ಸಂದರ್ಭದಲ್ಲಿ ಇದು ನೆರವಾಗುತ್ತಿತ್ತು. ನಾಲ್ಕು ತಿಂಗಳು ವಾಹನಗಳು ಸಂಚರಿಸಿದವು. ಈಗ ಇವು ಓಡುತ್ತಿಲ್ಲ. ಈ ಬಗ್ಗೆಅರಣ್ಯ ಅಧಿಕಾರಿಗಳನ್ನು ಕೇಳಿದರೆ, ವಾಹನಗಳ ಸಂಪೂರ್ಣ ಜವಬ್ದಾರಿಯನ್ನು ಆಯಾ ಗ್ರಾಮಗಳ ಅರಣ್ಯ ಅಭಿವೃದ್ಧಿ ಸಮಿತಿಗೆ ವಹಿಸಲಾಗಿದೆ ಎಂದು ಹೇಳುತ್ತಾರೆ.

ಪ್ರತಿಕ್ರಿಯೆ ಪಡೆಯಲು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಡಾ.ಜಿ.ಸಂತೋಷ್‌ಕುಮಾರ್‌ಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.

ಕನಿಷ್ಠ ರಸ್ತೆ ಸೌಲಭ್ಯ ಕಲ್ಪಿಸಿ

ರಸ್ತೆ, ವಿದ್ಯುತ್‌ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ರಸ್ತೆಯನ್ನಾದರೂ ದುರಸ್ತಿ ಮಾಡಿಕೊಡಬೇಕು. ಇದರಿಂದ ಓಡಾಡುವುದಕ್ಕೆ ಅನುಕೂಲವಾಗುತ್ತದೆ. ಬೆಟ್ಟಕ್ಕೆ ಬರುವ ಮುಖ್ಯಮಂತ್ರಿಗಳು ನಮ್ಮ ಗ್ರಾಮಗಳ ಬಗ್ಗೆ ಗಮನಹರಿಸಲಿ

–ಕೆಂಪಣ್ಣ,ತುಳಸಿಕೆರೆ

ಸಿಬ್ಬಂದಿ ನಿಯೋಜಿಸಿ

ಹಳೆಯೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರುಪಯುಕ್ತವಾಗಿ ನಿಂತಿದ್ದು ಅಲ್ಲಿಗೆ ಆರೋಗ್ಯ ಸಹಾಯಕರನ್ನು ನಿಯೋಜಿಸಲು ಆರೋಗ್ಯ ಇಲಾಖೆ ಕ್ರಮವಹಿಸಬೇಕು.

–ಶಿವಪ್ಪ,ಹಳೆಯೂರು

ಶಿಕ್ಷಣ ಪಡೆಯುವುದು ಕಷ್ಟ

ಅರಣ್ಯದ ಒಳಗಿರುವ ಗ್ರಾಮಗಳ ಶಾಲೆಗಳಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಿಲ್ಲ. ಬೇರೆ ಊರಿನ ಶಾಲೆಗಳಿಗೆ ಹೋಗಬೇಕಾದರೆ ಅರಣ್ಯದಲ್ಲಿ ನಡೆದುಕೊಂಡೇ ಹೋಗಬೇಕು. ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು.

–ಲೋಕೇಶ್,ಮಹದೇಶ್ವರಬೆಟ್ಟ

ಸಾರಿಗೆ ವ್ಯವಸ್ಥೆ ಮಾಡಿ

ತೋಕೆರೆ, ತೇಕಾಣೆ ಹಾಗೂ ದೊಡ್ಡಾಣೆಗೆ ಸಾರಿಗೆ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವುದರ ಮೂಲಕ ನಮಗೆ ಅನುಕೂಲ ಮಾಡಿಕೊಡಬೇಕು.

–ಬೊಮ್ಮಯ್ಯ,ದೊಡ್ಡಾಣೆ

6 ಗ್ರಾಮಗಳಿಗೆ ವಿದ್ಯುತ್‌ : ಕ್ರಮ

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಶಾಸಕ ಆರ್‌.ನರೇಂದ್ರ, ‘ಅರಣ್ಯದ ಒಳಗಡೆ ಇರುವ ಗ್ರಾಮಗಳಲ್ಲಿ ಈಗಾಗಲೇ ಸೋಲಾರ್‌ ಅಳವಡಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆರು ತೋಕರೆ, ಪಡಸಲನತ್ತ ಸೇರಿದಂತೆ ಆರು ಗ್ರಾಮಗಳಿಗೆ ಕೇಬಲ್‌ ಮೂಲಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆದಿದೆ. ₹6 ಕೋಟಿ ಯೋಜನೆಗೆ ಸೆಸ್ಕ್‌ ಅನುಮೋದನೆ ನೀಡಿದೆ. ಅರಣ್ಯ ಇಲಾಖೆಯೂ ಕೇಬಲ್‌ ಅಳವಡಿಸಲು ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿಯವರಿಂದ ಯೋಜನೆಯನ್ನು ಘೋಷಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಅರಣ್ಯದೊಳಗೆ ರಸ್ತೆ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಕಾನೂನು ಅವಕಾಶ ನೀಡುವುದಿಲ್ಲ. ಹಾಗಾಗಿ, ಇರುವ ರಸ್ತೆಯನ್ನೇ ನಿರ್ವಹಿಸುವುದು ಅನಿವಾರ್ಯ’ ಎಂದರು.

‘ನನ್ನ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಹನೂರಿಗೆ ಬಂದಾಗ ಅವರಿಗೂ ಮನವಿ ಸಲ್ಲಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT