ಚಾಮರಾಜನಗರ: ‘ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಗುರಿ. ನನ್ನ ಆದ್ಯತೆಯೂ ಅದುವೇ’ ಎಂದು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹೇಳಿದರು.
ಜಿಲ್ಲಾ ಎಸ್ಪಿಯಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿರುವ ಅವರು ‘ಪ್ರಜಾವಾಣಿ’ಯೊಂದಿಗೆ ಮಂಗಳವಾರ ಮಾತನಾಡಿದರು.
‘ಜಿಲ್ಲೆ ನನಗಿನ್ನೂ ಹೊಸದು. ಹಾಗಾಗಿ ತಕ್ಷಣಕ್ಕೆ ಹೊಸ ಯೋಜನೆ ಹಾಕಿಕೊಂಡಿಲ್ಲ. ಆದರೆ, ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಾನು ಆದ್ಯತೆ ನೀಡುತ್ತೇನೆ’ ಎಂದು ಪದ್ಮಿನಿ ಹೇಳಿದರು.
‘2021ರಲ್ಲಿ ನಾನು ಕರ್ನಾಟಕ ಕೆಡರ್ಗೆ ವರ್ಗಾವಣೆಗೊಂಡಿದ್ದೇನೆ. ಈಗ ಕರ್ನಾಟಕವೇ ನನ್ನ ಮನೆ. ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡಿದ್ದೇನೆ. ನನ್ನ ರಾಜ್ಯ ಒಡಿಶಾದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ’ ಎಂದರು.
ಎಲ್ಲ ಠಾಣೆಗೂ ಭೇಟಿ: ‘ಜಿಲ್ಲೆಯಲ್ಲಿ ಯಾವುದೆಲ್ಲಾ ಪ್ರಮುಖ ಸಮಸ್ಯೆಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಗಣಿಗಾರಿಕೆ ಸೇರಿದಂತೆ ಹಲವು ವಿಷಯಗಳಿರಬಹುದು. ಅವುಗಳನ್ನು ಅಧ್ಯಯನ ನಡೆಸಬೇಕಿದೆ. ಅಪರಾಧ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಬೇಕಾಗಿದೆ. ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ’ ಎಂದು ಹೇಳಿದರು.
‘ಚಾಮರಾಜನಗರ ಜಿಲ್ಲೆಯ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಅರಣ್ಯ ಪ್ರದೇಶ ಇಲ್ಲಿ ಹೆಚ್ಚಾಗಿದೆ. ಒಡಿಶಾದಂತೆಯೇ ಇಲ್ಲಿಯೂ ಆದಿವಾಸಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದರು.