ಚಾಮರಾಜನಗರ: ಬೆಂಗಳೂರಿನ ಡಿ.ಜಿ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡಿಸಿ ಆಜಾದ್ ಹಿಂದೂ ಸೇನೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಶ್ರೀಚಾಮರಾಜೇಶ್ವರ ಉದ್ಯಾನವನ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಮಾನವ ಸರಪಳಿ ರಚಿಸಿ ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿ, ಗಲಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಜಾದ್ ಹಿಂದೂ ಸೇನೆಯ ಅಧ್ಯಕ್ಷ ಎಂ.ಎಸ್.ಫೃಥ್ವಿರಾಜ್ ಅವರು,‘ಬೆಂಗಳೂರಿನ ದೇವರ ಜೀವನಹಳ್ಳಿ (ಡಿ.ಜಿ.ಹಳ್ಳಿ) ಗಲಭೆ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಕರ್ತವ್ಯ ನಿರತ ಪೊಲೀಸರ ಮೇಲೆ ಮಾಡಿರುವ ಹಲ್ಲೆ ಖಂಡನೀಯ. ಹಲ್ಲೆಕೋರರನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.
‘ಪ್ರಕರಣದಲ್ಲಿ ಎಸ್ಡಿಪಿಐ ಮುಖಂಡರ ಪಾತ್ರ ಇದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಆ ಸಂಘಟನೆಯನ್ನು ನಿಷೇಧಿಸಬೇಕು’ ಎಂದು ಅವರು ಒತ್ತಾಯಿಸಿದರು.
ಆಜಾದ್ ಹಿಂದೂ ಸೇನೆಯ ಜಿಲ್ಲಾಧ್ಯಕ್ಷ ಶಿವು ವಿರಾಟ್, ನಗರ ಘಟಕ ಅಧ್ಯಕ್ಷ ಶಿವನಾಯಕ, ನಟ, ಮಹೇಶ್, ವೆಂಕಿ, ರಘು, ಬಸವರಾಜು, ಮಣಿ, ಕೃಷ್ಣಮೂರ್ತಿ, ರವಿ, ಚಂದ್ರು, ಗಣೇಶ್, ಕಿರಣ್, ಪ್ರವೀಣ್, ಹರ್ಷದ್ಗೌಡ, ಮಂಜುನಾಥ್, ಆಟೋಮಂಜು, ಕಾರ್ತಿಕ್, ಸ್ವಾಮಿ, ಪ್ರಸನ್ನ, ಸೆಲ್ವರಾಜ್, ಮಹೇಶ್, ಶಶಿ ಇದ್ದರು.
ಪತ್ರಕರ್ತರಿಂದಲೂ ಪ್ರತಿಭಟನೆ
ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದಲೂ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.