ಚಾಮರಾಜನಗರ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿಶ್ವಶಾಂತಿ ನಿಕೇತನ ಆಶ್ರಮ ಶಾಶ್ವತವಾದ ಸಾಂಸ್ಕೃತಿಕ ಸ್ಮಾರಕ ಆಗಬೇಕು ಎಂದು ಚಾಮರಾಜನಗರ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್.ಜಯದೇವ ಬುಧವಾರ ಅಭಿಪ್ರಾಯಪಟ್ಟರು.
ವಿಶ್ವಶಾಂತಿ ನಿಕೇತನದ ಸ್ವಾಮಿ ನಿರ್ಮಾಲಾನಂದರ ನೂರನೇ ವರ್ಷಾಚರಣೆ ಹಾಗೂ ಸ್ವಾಮಿಯವರ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅರಣ್ಯ ಕಾಯ್ದೆಗೆ ಯಾವುದೇ ಧಕ್ಕೆ ಬಾರದಂತೆ ವಿಶ್ವಶಾಂತಿ ನಿಕೇತನ ಆಶ್ರಮವನ್ನು ಸಾಂಸ್ಕೃತಿಕ ನೆಲೆ ಎಂದು ಘೋಷಣೆ ಮಾಡಬೇಕು. ಸ್ವಾಮಿ ನಿರ್ಮಲಾನಂದರು ಜಗತ್ತಿನ ಒಳಿತಿಗಾಗಿ ಸ್ವಾಮಿಜಿ ಬದುಕಿದ್ದವರು. ಅವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮಗಳು ಆಗಬೇಕು. ಈ ಆಶ್ರಮ ಒಬ್ಬ ವ್ಯಕ್ತಿಯ ಘನತೆಯನ್ನು ಸ್ಮರಣೆ ಮಾಡುವಂತಹ ಜಾಗ. ಮನುಷ್ಯನಲ್ಲಿ ಸರಳತೆ ಇದ್ದರೆ ನಾವು ಸಂತೋಷವಾಗಿ ಇರುತ್ತೇವೆ’ ಎಂದರು.
ವಿಶ್ವಶಾಂತಿ ನಿಕೇತನ ಆಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 'ಸ್ವಾಮಿ ನಿರ್ಮಾಲಾನಂದರು ಸತ್ಯದ ಅನ್ವೇಷಣಕ್ಕಾಗಿ ಪ್ರಪಂಚದಾದ್ಯಂತ ಪರ್ಯಟನೆ ಮಾಡಿದ್ದರು. ಸ್ವಾಮೀಜಿಯವರು ಪೂರ್ವಾಶ್ರಮದಲ್ಲಿ ಒಬ್ಬ ಯೋಧರಾಗಿ ದೇಶ ಸೇವೆ ಕೂಡ ಮಾಡಿದ್ದರು ಮತ್ತು ಈ ಆಶ್ರಮಕ್ಕೆ ಬಂದ ಮೇಲೆ 11 ವರ್ಷಗಳ ಕಾಲ ಮೌನಾಚರಣೆ ಮಾಡಿದ್ದರು. ಅವರ ಬದುಕೇ ಒಂದು ಆದರ್ಶವಾಗಿತ್ತು. ಅವರ ಅಂತ್ಯದವರೆವಿಗೂ ದಿವ್ಯ ಸಾಧನೆಗಳನ್ನು ಮಾಡಿ ಸ್ವ ಇಚ್ಚೆಯಿಂದ ಮರಣ ಹೊಂದಿದ್ದರು’ ಎಂದರು.
ಗಾಂಧಿವಾದಿ ಸಿ.ಪಿ.ಹುಚ್ಚೇಗೌಡ, ಯರಗಂಬಳ್ಳಿ ಗ್ರಾಮದ ಸೊಮಣ್ಣ ಮತ್ತು ಗ್ರಾಮಸ್ಥರು, ಬೆಂಗಳೂರಿನ ನಂದಿನಿ ಗಣೇಶ್ ಪ್ರಸಾದ್ ಸೇರಿದಂತೆ ಸ್ವಾಮೀಜಿ ಅನುಯಾಯಿಗಳು, ಬೆಟ್ಟದ ಸುತ್ತುಮುತ್ತಲಿನ ಪೋಡುಗಳ ಸೋಲಿಗರು ಇದ್ದರು.