ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗನತ್ತ ಪ್ರಕರಣ |ರಕ್ಷಣೆ ನೀಡಲು ಗಿರಿಜನರ ಆಗ್ರಹ: ಶಾಂತಿಯುತ ಪ್ರತಿಭಟನೆ

Published 28 ಏಪ್ರಿಲ್ 2024, 4:19 IST
Last Updated 28 ಏಪ್ರಿಲ್ 2024, 4:19 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಂದಾರೆ ಗ್ರಾಮದ ಬುಡಕಟ್ಟು ಜನರ ಮೇಲೆ ಶುಕ್ರವಾರ ನಡೆದ ದೌರ್ಜನ್ಯ ಖಂಡಿಸಿ ಜಿಲ್ಲಾ ಗಿರಿಜನ ಬುಡಕಟ್ಟು ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಆದಿವಾಸಿ ಸಮುದಾಯದವರು ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. 

‘ಪಟ್ಟ ಭದ್ರ ಹಿತಾಶಕ್ತಿಗಳು ದೌರ್ಜನ್ಯ ಎಸಗಿದ್ದು, ಸಮುದಾಯದ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಬೆಟ್ಟದ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಸಾಗಿ ಕೆಲ ಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಅಧ್ಯಕ್ಷ ದೊಡ್ಡಸಿದ್ದ ಮಾತನಾಡಿ, ‘ಮೆಂದಾರೆ ಗ್ರಾಮದವರು ಶುಕ್ರವಾರ ಮತದಾನ ಮಾಡಲು ಇಂಡಿಗನತ್ತ ಬೂತ್‌ಗೆ ತೆರಳಿದ್ದು, ಈ ಸಂದರ್ಭದಲ್ಲಿ ಮತ ಹಾಕಬಾರದು ಎಂದು ಬುಡಕಟ್ಟು ಜನಾಂಗಯೇತರರು ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ. ಇದರಿಂದ ಸಮುದಾಯದ ಹಲವರು ಗಾಯಗೊಂಡಿದ್ದಾರೆ. ಕೆಲವರಿಗೆ ತೀವ್ರವಾಗಿ ಏಟು ಬಿದ್ದಿದ್ದು, ಅಂಗವಿಕಲರಾಗುವವ ಸಾಧ್ಯತೆಯೂ ಇದೆ’ ಎಂದು ದೂರಿದರು. 

‘ಹಲ್ಲೆ ನಡೆಸಿದವರು ಜಾತಿ ನಿಂದನೆ ಮಾಡಿರುವುದಲ್ಲೆ ಅವಾಚ್ಯ ಶಬ್ದಗಳನ್ನು ಆಡಿದ್ದು ದೌರ್ಜನ್ಯ ಎಸಗಿದ್ದಾರೆ. ಇದರಿಂದಾಗಿ ಬುಡಕಟ್ಟು ಜನರು ಭಯಭೀತರಾಗಿದ್ದು ಅವರಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು. 

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ, ಮುಖಂಡರಾದ ಮುತ್ತಯ್ಯ, ಮಹದೇವಸ್ವಾಮಿ, ಯು.ರಂಗೇಗೌಡ, ಗಿರಿಯ ಸೇರಿದಂತೆ ಹಲವರು ಭಾಗವಹಿಸಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT