ಗುಂಡ್ಲುಪೇಟೆ: ಮೈಸೂರಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ಬಾಬಾನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದು ವ್ಯಕ್ತಿಯೊಬ್ಬರು ಪಟ್ಟಣದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಟ್ಟಣದ ನಿವಾಸಿ ಮಹಮ್ಮದ್ ಅಫ್ವಾನ್ ಆತ್ಮಹತ್ಯೆ ಮಾಡಿಕೊಂ ಡವರು. ಸಾವಿಗೂ ಮುನ್ನ ಅವರು ಮರಣ ಪತ್ರಬರೆದಿದ್ದು, ‘ನನ್ನ ಸಾವಿಗೆ ಮೈಸೂರಿನ ಡೋಂಗಿ ಬಾಬಾ ಖುರ್ರಂ ಪಾಷಾ ಹಾಗೂ ಆತನ ಇಬ್ಬರು ಸಹಚರರು ಕಾರಣ’ ಎಂದು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಫ್ವಾನ್ ಅವರು ತಮ್ಮ ಪತ್ನಿತಾನ್ಜೇನಿಯಾ ಕೌಸರ್ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಬಾಬಾ ಖುರ್ರಂ ಪಾಷಾ ಎಂಬುವವರ ಬಳಿ ಚಿಕಿತ್ಸೆ ಕೊಡಿಸಲು ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಪಾಷಾ ಮತ್ತು ಅವರ ಇಬ್ಬರು ಸಹಚರರು ಕೌಸರ್ ಅವರ ತಲೆ ಕೆಡಿಸಿ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಮನನೊಂದ ಮಹಮದ್ ಅಫ್ಘಾನ್ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನನ್ನ ಪತ್ನಿ ತಲೆಕೆಡಿಸಿ ಬಾಬಾ ಅನೈತಿಕ ಸಂಬಂಧ ಹೊಂದಿದ್ದಾನೆ. ಅವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ’ ಎಂದು ಮರಣಪತ್ರದಲ್ಲಿ ಅಫ್ವಾನ್ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.