ಯಳಂದೂರು: ಪಟ್ಟಣದ ಅನತಿ ದೂರದ್ಲ್ಲಲಿದೆ ಕಂದಹಳ್ಳಿ ಗ್ರಾಮ. ಮೇಲ್ನೋಟಕ್ಕೆ ಗ್ರಾಮ ಒಂದೇ ಎಂದು ಕಂಡು ಬಂದರೂ ಅವಲ್ ಕಂದಹಳ್ಳಿ ಹಾಗೂ ದುಯಂ ಕಂದಹಳ್ಳಿ ಎಂದು ಎರಡು ಹೆಸರಲ್ಲಿ ಹಂಚಿಹೋಗಿದೆ.
ಮಲೆಮಹದೇಶ್ವರರು ಇಲ್ಲಿನ ಕಾರಾಪುರ ವಿರಕ್ತ ಮಠಕ್ಕೆ ಭೇಟಿ ನೀಡಿದ್ದರು ಎಂಬ ಐತಿಹ್ಯವಿದೆ. ಹಾಗಾಗಿ ಕಂದಹಳ್ಳಿಯಲ್ಲಿ ಮಾದಪ್ಪನ ದೇಗುಲ ಇದೆ ಎಂಬ ಪ್ರತೀತಿ ಇದೆ.
ಗ್ರಾಮಕ್ಕೆ ಕಾಲಿಟ್ಟರೆ ಮೂಲಭೂತ ಸಮಸ್ಯೆಗಳು ಅರಿವಾಗುತ್ತದೆ. ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ಚರಂಡಿಗಳ ನಿರ್ಮಾಣವಾಗಿಲ್ಲ. ಕೆಲವು ಕಡೆ ರಸ್ತೆಗೆ ಮಣ್ಣು ಸುರಿಯಲಾಗಿದ್ದರೂ, ಸಮರ್ಪಕ ರಸ್ತೆಗಳ ನಿರ್ಮಾಣವಾಗಿಲ್ಲ. ಇರುವ ಚರಂಡಿಗಳ ಹೂಳು ತೆಗೆಯದ ಕಾರಣ ಅವು ಗಬ್ಬು ನಾರುತ್ತಿವೆ. ಕಳೆದ ವಾರದಿಂದ ನೀರಿನ ಪೈಪ್ ಒಡೆದು ಹೋಗಿದ್ದು, ಗ್ರಾಮದ ಉಪ್ಪಾರ ಬಡಾವಣೆ ಜನರು ಕುಡಿಯುವ ನೀರಿಗೆ ಕೈಪಂಪ ಆಶ್ರಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಉಪ್ಪಾರ ಬಡಾವಣೆ ಜನರಂತೂ ಸಮಸ್ಯೆಗಳಲ್ಲೇ ಬದುಕಬೇಕಾದ ಅನಿವಾರ್ಯ ಇದೆ. ಇಲ್ಲಿನ ಮುಖ್ಯ ಚರಂಡಿಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇರುವ ಚರಂಡಿಯಲ್ಲಿ ಹೂಳು ತುಂಬಿದೆ. ಮಳೆಗಾಲ ಬಂದಾಗ ಇದರ ಪಕ್ಕದ ಮನೆಗಳಿಗೆ ಕಲುಷಿತ ನೀರು ನುಗ್ಗುತ್ತದೆ. ಚರಂಡಿ ಇಲ್ಲದ ಭಾಗದ ಜನರು ಇದರ ಮೇಲೆಯೇ ಚಪ್ಪಡಿ ಕಲ್ಲುಗಳನ್ನು ಇಟ್ಟು ಸರ್ಕಸ್ ಮಾಡಿಕೊಂಡು ಮನೆಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೆಡೆ ಚರಂಡಿಗಳ ನಿರ್ಮಾಣವೇ ಆಗಿಲ್ಲ.
ಕುಡಿಯುವ ನೀರಿನ 3 ತೊಂಬೆಗಳು ಸ್ಮಾರಕಗಳಾಗಿ ನಿಂತಿವೆ. ಇದಕ್ಕೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿರುವ ಸಾರ್ವಜನಿಕ ನಲ್ಲಿ ಚರಂಡಿಯ ಒಳಗೇ ಹೂತು ಹೋಗಿದ್ದು, ಇಲ್ಲೇ ಜನರು ನೀರು ಹಿಡಿಯುತ್ತಾರೆ.
ಹಾಗಾಗಿ ರೋಗಗಳಿಗೆ ಇದು ಜನ್ಮ ಸ್ಥಾನವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಹಲವು ಮನವಿ ಸಲ್ಲಿಸಿದರೂ, ಮಂತ್ರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ನಿತ್ಯ ಇಲ್ಲಿಂದಲೇ ಓಡಾಡುತ್ತಿದ್ದರೂ, ಇದು ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬಸವಶೆಟ್ಟಿ, ಬಂಗಾರಮ್ಮ, ಜ್ಯೋತಿ ಸೇರಿದಂತೆ ಹಲವರು ದೂರಿದ್ದಾರೆ.