ಕೊಳ್ಳೇಗಾಲ: ಇಡೀ ಗ್ರಾಮದ ನೀರಿನ ಬೇಡಿಕೆ ಪೂರೈಲಸು ಇರುವುದೊಂದೇ ಕೊಳೆವೆ ಬಾವಿ, ಚರಂಡಿ ತುಂಬ ಹೂಳು, ಶೌಚಾಲಯ ಸ್ಥಿತಿ ಅಧೋಗತಿ, ಅದಗೆಟ್ಟ ರಸ್ತೆ ಇವು ತಾಲ್ಲೂಕಿನ ಚಿಕ್ಕ ತಿರುಪತಿ ಎಂದೇ ಖ್ಯಾತಿಗಳಿಸಿರುವ ಪುಣ್ಯಕ್ಷೇತ್ರ ಬೂದಬಾಳು ಗ್ರಾಮದಲ್ಲಿನ ಅವ್ಯವಸ್ಥೆಗಳು.
ತಾಲ್ಲೂಕಿನ ಹನೂರು ಕ್ಷೇತ್ರ ವ್ಯಾಪ್ತಿಯನ್ನು ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಈವರೆಗೂ ಜನತೆಗೆ ಕುಡಿಯುವ ನೀರಿನ ಭವಣೆ ನೀಗಿಸಲು ಸರ್ಕಾರ ಕೈಗೊಂಡಿಲ್ಲ. ಗ್ರಾಮದ ಪ್ರತಿಷ್ಠಿತ ದೇವಾಲಯದ ಎದುರಿನಲ್ಲಿರುವ ಶೌಚಾಲಯ ನಿರುಪಯುಕ್ತವಾಗಿದ್ದು, ಭಕ್ತರು ಬಯಲು ಶೌಚಾಲಯ ಬಳಸಬೇಕಾದ ಅನಿವಾರ್ಯತೆ ಇದೆ. ನೀರಿನ ಸೌಲಭ್ಯ ಇಲ್ಲದ ಕಾರಣ ಶೌಚಾಲಯ ನಿರುಪಯುಕ್ತವಾಗಿದೆ ಎಂದು ಗಾ.ಪಂ. ಸದಸ್ಯ ಎನ್. ಮಹದೇವ ಹೇಳುತ್ತಾರೆ.
ಗ್ರಾಮಕ್ಕೆ ಮಂಗಲದ ಕಡೆಯಿಂದ ಬರುವ ರಸ್ತೆ ಹದಗೆಟ್ಟಿದ್ದು, ಕಲ್ಲುಗಳು ಮೇಲೆದ್ದು ಗುಂಡಿಗಳಾಗಿ ಸಂಚಾರಕ್ಕೆ ತೊಂದರೆಯಾಗಿದೆ.
ಅನೇಕ ಬೀದಿಗಳಲ್ಲಿ ಚರಂಡಿಗಳನ್ನು ನಿರ್ಮಿಸದಿರುವುದರಿಂದ ಮಳೆ ಬಂದಾಗ ನೀರು ಮನೆಗಳಿಗೇ ತೊಂದರೆ ಅನುಭವಿಸುವ ಸ್ಥಿತಿ ಇದೆ. ಚರಂಡಿಗಳ ಸಮರ್ಪಕ ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಮಳೆಯಾದರೆ ರಸ್ತೆಯ ಮಧ್ಯಭಾಗದಲ್ಲೇ ನೀರು ಹರಿಯುವುದರಿಂದ ಜನತೆ ಓಡಾಡಲು ಪರದಾಡುವಂತಾಗಿದೆ. ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಪ್ರತೀ ಶನಿವಾರ ತಾಲ್ಲೂಕು ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಪೂಜೆಗೆ ಆಗಮಿಸುತ್ತಿದ್ದು ಭಕ್ತರಿಗೆ ಬೇಕಾದ ಮೂಲಸೌಕರ್ಯ ಇಲ್ಲ.
ಈ ಗ್ರಾಮದ ಪ್ರಮುಖ ಸಮಸ್ಯೆಯಾದ ಕುಡಿುವ ನೀರು ಸಮಸ್ಯೆ ಪರಿಹಾರಕ್ಕೆ ಮತ್ತು ಗ್ರಾಮದ ಮುಖ್ಯ ರಸ್ತೆಯನ್ನು ಡಾಂಬರು ರಸ್ತೆಯನ್ನಾಗಿ ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.