ಚನ್ನರಾಯಪಟ್ಟಣ: ತಾಲ್ಲೂಕಿನ ಮಲ್ಲಪ್ಪನ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಾಲ್ವರು ಬೇಟೆಗಾರರು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಕೂಗೂರು ಗ್ರಾಮದ ಕುಮಾರಪ್ಪ, ಚಿಕ್ಕಾರೆ ಗ್ರಾಮದ ಸುನೀಲ್, ಹೆಗ್ಗೋಳ ಗ್ರಾಮದ ಎಚ್.ಕೆ.ತಮ್ಮೇಗೌಡ ಹಾಗೂ ಗೊಂದಳ್ಳಿಯ ಜಿ.ಆರ್.ಕೊಮಾರಪ್ಪ ಬಂಧಿತ ಆರೋಪಿಗಳು.
‘ಖಚಿತ ಮಾಹಿತಿಗೆ ಮೇರೆಗೆ ಮಲ್ಲಪ್ಪನಬೆಟ್ಟದ ಅರಣ್ಯಪ್ರದೇಶಕ್ಕೆ ತೆರಳಿ ಪರಿಶೀಲಿಸಿದಾಗ ಆ ಸಮಯದಲ್ಲಿ ಆರೋಪಿಗಳು ಕಾಡುಹಂದಿ ಬೇಟೆಯಾಡುತ್ತಿರುವುದು ಕಂಡುಬಂದಿತು. ಇಲಾಖೆ ಸಿಬ್ಬಂದಿ ನೋಡಿ ಓಡಿಹೋಗಲು ಯತ್ನಿಸಿದರು. ಅಷ್ಟರಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಬಂಧಿತರಿಂದ ಮೂರು ಬಂದೂಕು ವಶಕ್ಕೆ ಪಡೆಯಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಎಚ್.ಆರ್.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯಾಧಿಕಾರಿ ಸುದರ್ಶನ್, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಸಿಬ್ಬಂದಿಯಾದ ನಾಗೇಶ್, ಕರಿಗೌಡ, ದಯಾನಂದ್, ನಾಗರಾಜು, ಯೋಗೀಶ್, ಹರೀಶ್, ಮನ್ಸೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.