ಬಾಗೇಪಲ್ಲಿ: ‘ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ವೈ. ರವಿ ಹೇಳಿದರು.
ತಾಲ್ಲೂಕಿನ ಪರಗೋಡು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ, ಗ್ರಾಮಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರು ಹಾಗೂ ಗ್ರಾಮಗಳ ಪ್ರಗತಿಗೆ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆ. ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ, ಕೃಷಿಕರಿಗೆ ಸಲಕರಣೆಗಳು, ತುಂತುರು, ಹನಿ ನೀರಾವರಿಗೆ, ಕೃಷಿ ಹೊಂಡ ಸೇರಿದಂತೆ ನರೇಗಾ ಯೋಜನೆಯಡಿ ಅನೇಕ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ. ಜನರು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ದಲ್ಲಾಳಿಗಳು, ಅಧಿಕಾರಿಗಳಿಗೆ ಲಂಚ ನೀಡಬಾರದು. ಸೌಲಭ್ಯದ ಅಗತ್ಯ ಇದ್ದಲ್ಲಿ ನೇರವಾಗಿ ನನ್ನ ಕಚೇರಿಗೆ ಆಗಮಿಸಿದರೆ ಪರಿಹರಿಸಲಾಗುವುದು. ದರಖಾಸ್ತು ಹಾಗೂ ಸರ್ಕಾರಿ ಭೂಮಿಯಲ್ಲಿ ವಾಸ ಮಾಡುವವರಿಗೆ ಜಮೀನು ನೀಡಲಾಗುವುದು. ನಿಗಮ, ಮಂಡಳಿಗಳಿಂದ ಕೊಳವೆಬಾವಿ ಕೊರೆಯಿಸಲಾಗುತ್ತಿದೆ ಎಂದು
ತಿಳಿಸಿದರು.
ಅಧಿಕಾರಿಗಳು, ಸಿಬ್ಬಂದಿ ಜನಪರ ಕೆಲಸ ಮಾಡಬೇಕು. ವಿನಾಕಾರಣ ಕಚೇರಿಗಳಿಗೆ ಜನರನ್ನು ತಿರುಗಿಸಬಾರದು. ಭ್ರಷ್ಟಾಚಾರದ ಆರೋಪ ಹಾಗೂ ಜನಪರ ಕೆಲಸ ಮಾಡದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಅಧಿಕಾರಿ, ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಬೇಕು. ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲರ ಭತ್ಯೆ ಮಾಡಿಸಿಕೊಳ್ಳದ ಜನರಿಗೆ ದಾಖಲೆ ಪರಿಶೀಲಿಸಿ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಬೇಕು ಎಂದು
ದೂರಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎನ್. ಮಂಜುನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ, ಲೋಕೊಪಯೋಗಿ ಇಲಾಖೆಯ ಎಇಇ ರಾಮಲಿಂಗಾರೆಡ್ಡಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ತಾಲ್ಲೂಕು ಕೃಷಿ ಅಧಿಕಾರಿ ಕೆ.ಸಿ. ಮಂಜುನಾಥ್, ರೇಷ್ಮೆ ಅಧಿಕಾರಿ ಡಾ.ಚಿನ್ನಕೈವಾರಮಯ್ಯ, ಗ್ರೇಡ್ 2 ತಹಶೀಲ್ದಾರ್ ಸುಬ್ರಮಣ್ಯ, ಶಿರಸ್ತೇದಾರ್ ನಾಗರಾಜ್, ತಾಲ್ಲೂಕು ಸಾಕ್ಷರತಾ ಅಧಿಕಾರಿ ಎನ್. ಶಿವಪ್ಪ, ಪರಗೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ಕಾರ್ಯದರ್ಶಿ ಎಂ.ವಿ. ಪಾರ್ಥಸಾರಥಿ, ಅಧ್ಯಕ್ಷೆ ನಾಗಮಣಿ ಸದಾಶಿವಾರೆಡ್ಡಿ
ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.