ಚಿಕ್ಕಬಳ್ಳಾಪುರ: ‘ಭೋವಿ ಸಮುದಾಯದವರಿಗೆ ಕಲ್ಲು ಒಡೆಯಲು ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಭೋವಿ ಸಮುದಾಯದವರಿಗೆ ಕಲ್ಲು ಒಡೆಯಲು ಜಾಗ ಮೀಸಲಿಡಲು ಕ್ರಮಕೈಗೊಳ್ಳಲಾಗುತ್ತದೆ’ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಭೋವಿ ಸಮುದಾಯದ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಭೋವಿ ಸಮುದಾಯದ ಅಭಿವೃದ್ಧಿಗೆ ಡಿಸೆಂಬರ್ ನಂತರ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವೆ. ಭೋವಿ ಅಭಿವೃದ್ಧಿ ನಿಗಮಕ್ಕೆ ತಾತ್ಕಾಲಿಕವಾಗಿ ₹5 ಕೋಟಿ ಮಂಜೂರು ಮಾಡುವೆ’ ಎಂದು ತಿಳಿಸಿದರು.
‘ನಮ್ಮ ಸರ್ಕಾರದ ಉಳಿವಿಗಾಗಿ ಸದಾ ನಮ್ಮೊಂದಿಗೆ ಕಲ್ಲು ಬಂಡೆಯಂತೆ ನಿಂತ ಭೋವಿ ಸಮುದಾಯದ ಮುಖಂಡರ ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುವೆ. ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವೆ’ಎಂದು ಭರವಸೆ ನೀಡಿದರು.