ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ವಿದ್ಯಾಗಿರಿ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ?

Published 21 ಫೆಬ್ರುವರಿ 2024, 6:28 IST
Last Updated 21 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದ ವಿದ್ಯಾಗಿರಿ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಅರ್ಜಿಗೆ ಮತ್ತೆ ಜೀವ ಬಂದಿದೆ. ಇದು ಪಟ್ಟಣವಷ್ಟೇ ಅಲ್ಲ ತಾಲ್ಲೂಕಿನಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. 

ಈ ಹಿಂದೆ ಇಲ್ಲಿ ಗಣಿಗಾರಿಕೆ ನಡೆಸಲು ಬೆಂಗಳೂರಿನ ಕೆಲವರು ಮುಂದಾಗಿದ್ದರು. ಆಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರದ ಮಟ್ಟದಲ್ಲಿ ಅನುಮತಿ ನೀಡಲಿಲ್ಲ. ಬಿಜೆಪಿ ಆಡಳಿತ ಕೊನೆಯಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗಣಿಗಾರಿಕೆಗೆ ಚಾಲನೆ ದೊರೆಯುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. 

ಅದಕ್ಕೆ ಪುಷ್ಠಿ ಎನ್ನುವಂತೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡುವ ಸಂಬಂಧ ‌ಸರ್ಕಾರದಿಂದ ಕಡತವು 20 ದಿನಗಳ ಹಿಂದೆ ಗುಡಿಬಂಡೆ ತಹಶೀಲ್ದಾರ್ ಕಚೇರಿ ತಲುಪಿದೆ. ವಿದ್ಯಾಗಿರಿ ತಪ್ಪಲಿನಲ್ಲಿ ಗಣಿಗಾರಿಕೆ ನಡೆಸಲು ಈ ಹಿಂದಿನಿಂದಲೂ ದೊಡ್ಡಮಟ್ಟದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. 

ಗುಡಿಬಂಡೆ ಸಮೀಪದ ಸರ್ವೆ ನಂಬರ್ 21ರ ವಿದ್ಯಾಗಿರಿ ತಪ್ಪಲಿನ 10 ಎಕರೆ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ 2013–14ರಲ್ಲಿ ಬೆಂಗಳೂರಿನ ಕೆಲವರು ಕೋರಿದ್ದರು. ಇದಕ್ಕೆ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಪಟ್ಟಣ ನಾಗರಿಕರು ಆಕ್ಷೇಪಣೆ  ವ್ಯಕ್ತಪಡಿಸಿದ್ದರು.  ವಿದ್ಯಾಗಿರಿ ತಪ್ಪಲಿನ ಸರ್ವೆ ನಂಬರ್ 21ರಲ್ಲಿ 149.29 ಎಕರೆ ಕಂದಾಯ ಇಲಾಖೆ ಜಮೀನಿದ್ದು ಇದರಲ್ಲಿ 10 ಜನ ರೈತರಿಗೆ ತಲಾ 2 ಎಕರೆಯಂತೆ 20 ಎಕರೆ ಮಂಜೂರಾಗಿದೆ. 

ಗಣಿಗಾರಿಕೆಗೆ ಅನುಮತಿ ನೀಡುವ ಕಡತವು 2021ರಲ್ಲಿ ಗುಡಿಬಂಡೆ ತಹಶೀಲ್ದಾರ್ ಕಚೇರಿಗೆ ಬಂದಿತ್ತು. ಈ ವಿಚಾರ ಜನರಿಗೆ ತಿಳಿದು ಆಕ್ಷೇಪ ವ್ಯಕ್ತವಾಗಿತ್ತು.  ಕಲ್ಲುಗಣಿಗಾರಿಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿರುವ ಸ್ಥಳದ ಸುತ್ತ ಒಂದು ಕಿ.ಮಿ ಅಂತರದಲ್ಲಿ ಗುಡಿಬಂಡೆ, ಬ್ರಾಹ್ಮಣರಹಳ್ಳಿ, ಚಿನ್ನಹಳ್ಳಿ ಗ್ರಾಮದ ಸಾವಿರಾರು ಎಕರೆ ಕೃಷಿ ಭೂಮಿ ಇದೆ. 

ಆಕ್ಷೇಪ ವ್ಯಕ್ತವಾದ ಕಾರಣ ಗಣಿಗಾರಿಕೆಗೆ ಅವಕಾಶ ನೀಡಿರಲಿಲ್ಲ. ಈಗ ಎನ್‌ಒಸಿಗೆ ಸಂಬಂಧಿಸಿದ ಕಡತವು ತಹಶೀಲ್ದಾರರ ಕಚೇರಿ ತಲುಪಿದೆ. ಗಣಿಗಾರಿಕೆ ಆರಂಭವಾಗುತ್ತದೆಯೇ ಎನ್ನುವ ಭೀತಿ ಜನರಲ್ಲಿ ಮೂಡಿದೆ.

ಕಲ್ಲುಗಣಿಗಾರಿಕೆ ಅನುಮತಿಗಾಗಿ ಗುರುತಿಸಿರುವ ಜಮೀನಿನ ಅಕ್ಕಪಕ್ಕದಲ್ಲಿ ‌ಕುಡಿಯುವ ನೀರು ಒದಗಿಸುವ ಚಿಲುಮೆ, ತಿಮ್ಮಾಜಮ್ಮ ಗುಹೆ, ಸಾವಿರಾರು ಎಕರೆ ಕೃಷಿ ಜಮೀನು ಇದೆ. ಕಲ್ಲುಗಣಿಗಾರಿಕೆಯಿಂದ ಇವುಗಳಿಗೆ ಕುತ್ತು ಬರಲಿದೆ ಎನ್ನುವ ಅಭಿಪ್ರಾಯ ಜನರದ್ದಾಗಿದೆ.

ವಿದ್ಯಾಗಿರಿ ಬೆಟ್ಟ
ವಿದ್ಯಾಗಿರಿ ಬೆಟ್ಟ

ಪ್ರತಿಕ್ರಿಯಿಸದ ಶಾಸಕ ತಹಶೀಲ್ದಾರ್

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು  ತಹಶೀಲ್ದಾರ್ ಮನಿಷಾ ಅವರನ್ನು ಸಂ‍ಪರ್ಕಿಸಲಾಯಿತು. ಆದರೆ ಈ ಇಬ್ಬರು ಕರೆ ಸ್ವೀಕರಿಸಲಿಲ್ಲ. 

ಚರ್ಚೆಯಾಗಿತ್ತು ‘ಪ್ರಜಾವಾಣಿ’ ವರದಿ 

2021ರ ಸೆಪ್ಟೆಂಬರ್‌ನಲ್ಲಿ ‘ವಿದ್ಯಾಗಿರಿ ತಪ್ಪಲಿನಲ್ಲಿ ಕಲ್ಲುಗಣಿಕಾರಿಗೆ ಪ್ರಸ್ತಾವ? ಗುಂಡಿಬಂಡೆ ಸುತ್ತಲಿನ ಜನರ ಆತಂಕ’ ಎನ್ನುವ ವರದಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಪತ್ರಿಕೆಯ ವರದಿ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT