ಬಾಗೇಪಲ್ಲಿ: ಪಟ್ಟಣದ ಹೊರವಲಯದ ಟಿಬಿ ಕ್ರಾಸ್ ಅಂಗಡಿಯ ಮುಂದೆ ಭಾನುವಾರ ವ್ಯಕ್ತಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಸತ್ಯಸಾಯಿ ಜಿಲ್ಲೆಯ ಚಿಲಮತ್ತೂರು ಮಂಡಲದ ದೇಮಕೇತೆಪಲ್ಲಿ ಗ್ರಾಮದ ವೆಂಕಟೇಶಪ್ಪ (56) ಎಂದು ಗುರುತಿಸಲಾಗಿದೆ.
ಆಂಧ್ರಪ್ರದೇಶದ ಕಡೆಗೆ ಸಂಚರಿಸುವ ಬೈಪಾಸ್ ರಸ್ತೆಯಲ್ಲಿನ ಅಂಗಡಿ ಮುಂದಿನ ಖಾಲಿ ಜಾಗದಲ್ಲಿ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರು, ಶ್ವಾನದಳ ಆಗಮಿಸಿ ಪರೀಕ್ಷೆ ಮಾಡಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಎಲ್.ನಾಗೇಶ್, ಉಪ ಅಧೀಕ್ಷಕ ಶಿವಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಅಧೀಕ್ಷಕ ಡಿ.ಎಲ್.ನಾಗೇಶ್ ಮಾತನಾಡಿ, ‘ಕೊಲೆಯಾದ ವೆಂಕಟೇಶಪ್ಪ ಅವರ ಜೇಬಿನಲ್ಲಿ ಆಧಾರ್ ಲಭ್ಯವಾಗಿದೆ. ವ್ಯಕ್ತಿಯ ಗುರುತು ಸಿಕ್ಕಿದೆ. ಕೊಲೆಗೆ ನಿಖರ ಮಾಹಿತಿ ತಿಳಿದಿಲ್ಲ. ತನಿಖೆ ಮಾಡಲಾಗುತ್ತಿದೆ’ ಎಂದರು.