ಚಿಕ್ಕಬಳ್ಳಾಪುರ: ‘ಜಿಲ್ಲೆಗೆ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅ.24 ರಂದು ಭೂಮಿಪೂಜೆ ನೆರವೇರಿಸಲಿದ್ದಾರೆ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಮಂಚನಬಲೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ದಿಬ್ಬೂರು ಗ್ರಾಮ ಪಂಚಾಯಿತಿಯ ದಿಬ್ಬೂರು, ರಾಯಪ್ಪನಹಳ್ಳಿ, ಗೊಳ್ಳುಚಿನ್ನಪ್ಪನಹಳ್ಳಿ, ಲಕ್ಕಿನಾಯಕನಹಳ್ಳಿ, ರೇಣುಮಾಕಲಹಳ್ಳಿ, ಗಂಗರೇಕಾಲುವೆ, ಶೆಟ್ಟಿವಾರಹಳ್ಳಿ, ದೊಡ್ಡತಮ್ಮನಹಳ್ಳಿ, ಪುರದಗಡ್ಡೆ, ಚಲಕಾಯಲಪರ್ತಿ, ಗೊಳ್ಳು ಹಾಗೂ ನಲ್ಲಿಮರದಹಳ್ಳಿ ಗ್ರಾಮಗಳಲ್ಲಿ ಮುಖಂಡರ ಸಭೆ ನಡೆಸಿ ಅವರು ಜನಾಭಿಪ್ರಾಯ ಸಂಗ್ರಹಿಸಿದರು.
‘ಸಮ್ಮಿಶ್ರ ಸರ್ಕಾರದಲ್ಲಿನ ಆಡಳಿತ ಹಾಗೂ ಅಭಿವೃದ್ಧಿಯ ವೈಫಲ್ಯದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ನನ್ನ ಅಭಿವೃದ್ಧಿ ಹಾಗೂ ಜನಪರ ಕೆಲಸಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿಯೇ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದರು.