ಚಿಂತಾಮಣಿ: ಬಾರಾ ಇಮಾಮ್ ದರ್ಗಾ ಆವರಣದಲ್ಲಿ ರಾಜಸ್ಥಾನದ ಅಜ್ಮೀರದ ಧಾರ್ಮಿಕ ಗುರು ಹಜರತ್ ಖಾಜಾ ಮೊಯಿನುದ್ದೀನ್ ಚಿಸ್ತಿ ಅಜ್ಮೀರಿ ಅವರ ಸ್ಮರಣಾರ್ಥ ಧಾರ್ಮಿಕ ಕಾರ್ಯಕ್ರಮವನ್ನು ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ವಕೀಲ ವಜೀರ್ ಮಾತನಾಡಿ, ‘ಇಸ್ಲಾಂ ಧರ್ಮದ ಪ್ರಮುಖ ಧಾರ್ಮಿಕ ಗುರುಗಳಲ್ಲಿ ಒಬ್ಬರಾದ ಅಜ್ಮೀರದ ಖಾವಜ ಮೊಯಿನುದ್ದೀನ್ ಅಜ್ಮೀರಿ ಅವರ ಗೌರವಾರ್ಥವಾಗಿ ಖಾಜಾ ಚಿಟ್ಟಿಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ’ ಎಂದರು.
‘ವಿಶ್ವದ ಎಲ್ಲ ಧರ್ಮಗಳು ಶಾಂತಿಯನ್ನು ಸಾರಿವೆ. ಯಾವುದೇ ಧರ್ಮದಲ್ಲೂ ಹಿಂಸೆಗೆ ಅವಕಾಶವಿಲ್ಲ. ಎಲ್ಲ ಜಾತಿ, ಧರ್ಮದ ಜನರು ಸಹೋದರರಂತೆ ಪರಸ್ಪರ ಹೊಂದಾಣಿಕೆಯಿಂದ ಬದುಕು ಕಟ್ಟಿಕೊಳ್ಳುವುದೇ ಉತ್ತಮ ಮಾನವ ಧರ್ಮ ಎಂದು ಧಾರ್ಮಿಕ ಗುರುಗಳು ಸಂದೇಶ ನೀಡಿದ್ದಾರೆ’ ಎಂದು ನುಡಿದರು.
ಧಾರ್ಮಿಕ ಗುರುಗಳ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದರ್ಗಾಗೆ ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.