ಶಿಡ್ಲಘಟ್ಟ: ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲ್ಲೂಕಿನಲ್ಲಿನ ರಸ್ತೆ ಹಾಗೂ ಮೋರಿಗಳ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ.
ಲೊಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ವಡ್ನಹಳ್ಳಿ-11ನೇ ಮೈಲಿಗಲ್ಲು ರಸ್ತೆ, ಕೈವಾರ-ಏನಿಗದೆಲೆ ರಸ್ತೆ, ತಿಮ್ಮಸಂದ್ರ ಮಾರ್ಗವಾಗಿ ದಿಬ್ಬೂರಹಳ್ಳಿ-ಕೋರ್ಲಪರ್ತಿ ಮತ್ತು ದಿಂಬಾರ್ಲಹಳ್ಳಿ ಮಾರ್ಗದಲ್ಲಿನ ನಾಲ್ಕು ಮೋರಿಗಳು ಮಳೆ ನೀರಿಗೆ ಹಾಳಾಗಿದ್ದವು.
ಲೊಕೋಪಯೋಗಿ ಇಲಾಖೆಯ ಎಇಇ ಆರ್.ಲೊಕೇಶ್ ಅವರು ಹಾಗೂ ಸಿಬ್ಬಂದಿಯು ಸ್ಥಳದಲ್ಲೆ ಇದ್ದು ತಾತ್ಕಾಲಿಕವಾಗಿ ಮೋರಿಗಳ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಕಾರ್ಯ ನಡೆಯುತ್ತಿದೆ.
‘ನಮ್ಮ ಇಲಾಖೆ ವ್ಯಾಪ್ತಿಗೆ ಬರುವ ನಾಲ್ಕು ಮೋರಿಗಳು ಮಳೆ ನೀರಿಗೆ ಹಾಳಾಗಿದ್ದು ದುರಸ್ತಿ ಕೈಗೆತ್ತಿಕೊಂಡಿದ್ದೇವೆ. ಹಣ ಬಿಡುಗಡೆ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅನುದಾನಕ್ಕೆ ಕಾಯದೆ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ಗುತ್ತಿಗೆದಾರರ ನೆರವಿನಿಂದ ಈಗಾಗಲೆ ದುರಸ್ತಿ ಆರಂಭಿಸಿದ್ದೇವೆ ಎಂದು ಪಿಡಬ್ಲ್ಯೂಡಿ ಇಲಾಖೆ ಎಇಇಆರ್.ಲೋಕೇಶ್ ಹೇಳಿದರು.