ಶಿಡ್ಲಘಟ್ಟ: ‘ಸಾಲಕ್ಕೆ ಡಿಸಿಸಿ ಬ್ಯಾಂಕ್ ಬೇಕು. ಠೇವಣಿ ಇಡಲು ಮಾತ್ರ ರಾಷ್ಟ್ರೀಕೃತ ಬ್ಯಾಂಕ್ಗಳು ಬೇಕು ಎನ್ನುವ ಧೋರಣೆಯನ್ನು ರೈತರು ಸೇರಿದಂತೆ ಹಾಲು ಉತ್ಪಾದಕರು ಬಿಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶುಕ್ರವಾರ ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, 2019-20ನೇ ಸಾಲಿನ ವಾರ್ಷಿಕ ಮಹಾಸಭೆಯಯಲ್ಲಿ ಮಾತನಾಡಿದರು.
‘ರೈತರ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಬೇಡಿಕೆಗೆ ಅನುಸಾರವಾಗಿ ಸಾಲ ನೀಡಬೇಕಾದರೆ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆಗೆಯುವ ಮೂಲಕ ಠೇವಣಿ ಇಡಬೇಕು. ತಾಲ್ಲೂಕಿನಾದ್ಯಂತ ಇರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ಖಾತೆಗಳನ್ನು ಡಿಸಿಸಿ ಬ್ಯಾಂಕ್ನಲ್ಲಿ ತೆರೆಯಿರಿ’ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ. ನಾಗರಾಜ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಎಂಪಿಸಿಎಸ್ ಖಾತೆಗಳನ್ನು ಡಿಸಿಸಿ ಬ್ಯಾಂಕ್ನಲ್ಲಿ ಮಾಡಿಸುವುದರಿಂದ ಈ ಭಾಗದ ರೈತರು ಸೇರಿದಂತೆ ಹಾಲು ಉತ್ಪಾದಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.
‘ಹಿಂದೆ ಏನೋ ಆಯ್ತು ಎಂದು ಈಗ ಡಿಸಿಸಿ ಬ್ಯಾಂಕ್ನಲ್ಲಿ ಹಣವಿಡಲು ಹಿಂಜರಿಯುವುದು ಸರಿಯಲ್ಲ. ಇದೀಗ ಬ್ಯಾಂಕ್ ತಾಲ್ಲೂಕಿಗೆ ಕೋಟ್ಯಂತರ ರೂಪಾಯಿಯ ಸಾಲ ನೀಡಿದೆ’ ಎಂದರು.
ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್. ಮುನಿಯಪ್ಪ, ಉಪಾಧ್ಯಕ್ಷ ತಿಮ್ಮಯ್ಯ, ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್. ಆನಂದ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ. ಉಷಾರಾಣಿ, ಸಂಘದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.