ಚಿಕ್ಕಬಳ್ಳಾಪುರ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಂತದಲ್ಲಿಯೇ ಉತ್ತಮ ಮೌಲ್ಯಾಧಾರಿತ ಪ್ರೇರಣೆ ಅವಶ್ಯ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಲ್ಲಿ ಗುಣಮಟ್ಟದ ಕಲಿಕಾ ಆಸಕ್ತಿ ಮತ್ತು ಶಿಸ್ತು ಅಡಗಿದೆ. ಅದನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಿದರೆ ಇಡೀ ದೇಶವೇ ಪ್ರಗತಿಯತ್ತ ಸಾಗುತ್ತದೆ ಎಂದರು.
ಜಿ.ಪಂ ಸದಸ್ಯ ಕೆ.ಕೆಂಪರಾಜು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಮಕ್ಕಳ ಕಲಿಕಾಸಕ್ತಿಗೆ ಪೂರಕವಾಗಿ ಪ್ರೋತ್ಸಾಹ ನೀಡಿದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಉನ್ನತ ಮಟ್ಟಕ್ಕೇರುವ ಜತೆಗೆ ಉಜ್ವಲ ಭವಿಷ್ಯ ಪಡೆಯುತ್ತಾರೆ ಎಂದು ಹೇಳಿದರು.
ಲತಾ ಶಿವಕುಮಾರ್, ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿವಲಿಂಗಯ್ಯ, ಶ್ರೀನಿವಾಸ್, ಶಿವಪ್ರಕಾಶ್, ಅಂಜಿನಪ್ಪ, ಅನುಪಮಾ, ಲಕ್ಷ್ಮಿಕಾಂತ್, ಸತ್ಯನಾರಾಯಣ ಇದ್ದರು.