ಶಿಡ್ಲಘಟ್ಟ: ಬೇಸಿಗೆ ಬಂತೆಂದರೆ ಎಲ್ಲೆಡೆ ಒಂದೊಂದು ಬಗೆ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ, ಶಿಡ್ಲಘಟ್ಟದಲ್ಲಿ ಜನರು ನನ್ನಾರಿಗೆ (ಸೊಗದ ಬೇರು) ಮೊರೆ ಹೋಗುತ್ತಾರೆ. ಈ ಬಾರಿ ಬೇಸಿಗೆಯು ದೇಹದ ಉಷ್ಣಾಂಶ ಹೆಚ್ಚಿಸಿರುವುದರಿಂದ ಜನರು ನನ್ನಾರಿ ಸೋಡ, ಮಿಲ್ಕ್ ನನ್ನಾರಿ, ನಿಂಬು ಸೋಡ, ನಿಂಬು ಶರಬತ್ಗೆ ಮುಗಿಬೀಳುತ್ತಿದ್ದಾರೆ.
ಪ್ರತಿ ಬೇಸಿಗೆಯಲ್ಲಿ ಎಳನೀರಿನ ಜತೆಗೆ ನಾನಾ ಹಣ್ಣುಗಳಿಂದ ತಯಾರಿಸಿದ ತಂಪು ಪಾನೀಯಗಳಿಗೂ ಬೇಡಿಕೆ ಇದೆ. ಕೆಲವರಂತೂ ಲಸ್ಸಿ, ಮಜ್ಜಿಗೆ, ಕಬ್ಬಿನ ಹಾಲನ್ನೇ ಬಯಸುತ್ತಾರೆ. ನಾನಾ ಹಣ್ಣು, ಹಣ್ಣಿನಿಂದ ತಯಾರಿಸಿದ ತಂಪು ಪಾನೀಯ ಇಷ್ಟಪಡುತ್ತಾರೆ. ಆದರೆ, ಅನೇಕರು ನನ್ನಾರಿ ಕುಡಿಯಲು ಇಚ್ಛಿಸುತ್ತಾರೆ. ಹಾಗಾಗಿ, ಇಲ್ಲಿ ಇತರ ತಂಪು ಪಾನೀಯಗಳ ಜತೆ ನನ್ನಾರಿಗೂ ಅದರದ್ದೇ ಆದ ಗ್ರಾಹಕರಿದ್ದಾರೆ.
ಶಿಡ್ಲಘಟ್ಟದಲ್ಲಿ ಹಲವು ವರ್ಷಗಳಿಂದ ಅಶೋಕ ರಸ್ತೆಯಲ್ಲಿ ಸೋಡಾ ಅಂಗಡಿ ಇಟ್ಟುಕೊಂಡಿರುವ ನವೀನ್ ಅವರು ನನ್ನಾರಿ, ಮಿಲ್ಕ್ ನನ್ನಾರಿ, ಮುಂತಾದ ಹಲವು ನನ್ನಾರಿ ಮಿಶ್ರಿತ ಪೇಯ ಹಾಗೂ ಪೀಚ್, ಮಾವು, ಸೀಬೆ, ಲಾವಂಚ, ಮೊಜಿತೊ, ಜೀರಾ ಮಸಾಲ, ಪುದೀನಾ ಮಸಾಲ ಪೇಯ ಮಾರುತ್ತಾ ನಾನಾ ರೀತಿಯ ಶರಬತ್ ಪ್ರಿಯರಿಗೆ ನೆಚ್ಚಿನ ವ್ಯಕ್ತಿಯಾಗಿದ್ದಾರೆ.
‘ನನ್ನಾರಿ ಮಹತ್ವ ಅರಿತ ಗ್ರಾಹಕ ವರ್ಗವಷ್ಟೇ ಮೊದಲಿನಿಂದಲೂ ಪ್ರತಿ ಬೇಸಿಗೆಯಲ್ಲಿ ನನ್ನಾರಿ ಕುಡಿಯುವ ರೂಢಿ ಇಟ್ಟುಕೊಂಡಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರ ದಾಹ ತೀರಿಸುವ ತಂಪು ಪಾನೀಯವಾಗಿ ಗುರುತಿಸಿಕೊಂಡಿದೆ. ಚಳಿಗಾಲ, ಮಳೆಗಾಲದಲ್ಲಿ ಇದರ ಮಾರಾಟ ಕಡಿಮೆ. ಆದರೂ, ಉಷ್ಣದ ದೇಹ ಪ್ರಕೃತಿಯುಳ್ಳವರು ಇದರ ಔಷಧ ಗುಣದಿಂದಾಗಿ ಇಷ್ಟಪಟ್ಟು ಕುದಿಯುತ್ತಾರೆ‘ ಎಂದು ಸೋಡಾ ನವೀನ್ ಹೇಳುತ್ತಾರೆ.
‘ನಮ್ಮ ಅಂಗಡಿಯಲ್ಲಿ ರೋಸ್ಮಿಲ್ಕ್ ನಿಂಬು ಸೋಡ ಹಾಲು ಲಸ್ಸಿ ಜತೆಯಲ್ಲಿ ಸೋಡ ಮತ್ತು ನನ್ನಾರಿ ಬೆರೆಸಿ ಕಳೆದ ಹತ್ತಾರು ವರ್ಷಗಳಿಂದ ಮಾರಾಟ ಮಾಡುತ್ತಿದ್ದೇನೆ. ಆದರೆ ಪ್ರತಿ ಬೇಸಿಗೆ ಸಂದರ್ಭದಲ್ಲಿ ನನ್ನಾರಿಗೆ ನಮ್ಮಲ್ಲಿ ಹೆಚ್ಚು ಬೇಡಿಕೆ ಇದೆ’.ಸೋಡ ನವೀನ್ ವ್ಯಾಪಾರಿ ಅಶೋಕ ರಸ್ತೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.