ಚಿಂತಾಮಣಿ: ತಾಲ್ಲೂಕಿನ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ಕೋನಾಪುರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಂಧ್ರಪ್ರದೇಶದ ಎದ್ದುಲೋಳ ಪಲ್ಲಿಯ ಕೆ.ಎನ್. ಶಂಕರಪ್ಪ ಬಂಧಿತ. ಕೋನಾಪುರದ ನರೇಶ್ ಎಂಬುವರ ಇಬ್ಬರು ಪತ್ನಿಯರು ಅ. 19ರಂದು ಹೊಲದಲ್ಲಿ ಕಡಲೆಕಾಯಿ ಬಿಡಿಸುವ ಕೆಲಸಕ್ಕೆ ಹೋಗಿದ್ದರು. ಸಂಜೆ ಎರಡನೇ ಪತ್ನಿ ಜಾನುವಾರು ಹಿಡಿದುಕೊಂಡು ಮನೆಗೆ ಬಂದಿದ್ದರು.
ಕತ್ತಲಾದರೂ ಮೊದಲನೇ ಪತ್ನಿ ಮನೆಗೆ ಬಂದಿರಲಿಲ್ಲ. ಪತಿ ಹುಡುಕಿಕೊಂಡು ಹೊಲದ ಬಳಿ ಹೋದಾಗ ಶೋಭಾ(28) ಕೊಲೆಯಾಗಿದ್ದರು.
ಬಟ್ಲಹಳ್ಳಿ ವ್ಯಾಪ್ತಿಯ ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಅಪರಿಚಿತ ವ್ಯಕ್ತಿಗಳ ಚಿತ್ರಗಳನ್ನು ಶೋಭಾ ಅವರ ಮಗಳಿಗೆ ಮತ್ತು ಹೊಲದ ಬಳಿ ಕಂಡಿದ್ದ ಇಬ್ಬರು ಯುವಕರಿಗೆ ತೋರಿಸಿದಾಗ ಆರೋಪಿಯನ್ನು ಗುರುತಿಸಿದ್ದರು. ಪತಿ ಸಹ ಅಪರಿಚಿತ ವ್ಯಕ್ತಿ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದರು.