ಬಾಗೇಪಲ್ಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಚಿಂದಿ ಆಯುವವರ ಬದುಕು, ಬವಣೆ ಅಸಹನೀಯ ಸ್ಥಿತಿಯಲ್ಲಿದೆ.
ಪಟ್ಟಣದ ಹೊರವಲಯ ಸೇರಿದಂತೆ ಸುತ್ತಮುತ್ತಲಿನ ಜಾಗಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಗುಜರಿ ಅಂಗಡಿಗಳು ಇವೆ. ಪಟ್ಟಣದ ಪ್ರವಾಸಿ ಮಂದಿರದ ಮುಂದೆ, ಕೊಂಡಂವಾರಿಪಲ್ಲಿ ಹಾಗೂ ಗೂಳೂರು ರಸ್ತೆಯ ಕಡೆಗಳಲ್ಲಿ ಗುಜರಿ ಅಂಗಡಿ ಇದೆ. ಗುಜರಿ ಅಂಗಡಿಗಳಿಗೆ ಪ್ಲಾಸ್ಟಿಕ್, ಕಬ್ಬಿಣ ಸಾಮಾನುಗಳು ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳ ಸಂಗ್ರಹಣಾ ಕೇಂದ್ರ ಆಗಿದೆ. ಕಸದ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯವು ಹೆಚ್ಚಾಗಿದೆ.
ಮುಖ್ಯರಸ್ತೆ ಸೇರಿದಂತೆ ವಿವಿಧ ಬೀದಿಗಳಲ್ಲಿ, ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ತ್ಯಾಜ್ಯ, ಬಿಯರ್ ಹಾಗೂ ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ಗಳನ್ನು ರಾಶಿಗಟ್ಟಲೆ ತುಂಬಿದ್ದಾರೆ. ಚಿಂದಿ ಆಯುವವರ ಜೀವನಕ್ಕೆ ಪ್ಲಾಸ್ಟಿಕ್ ತ್ಯಾಜ್ಯವೇ ಬದುಕಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಆಯುವುದನ್ನೇ ಕೆಲವರು ಕುಲಕಸುಬು ಮಾಡಿಕೊಂಡಿದ್ದಾರೆ.
ಪಟ್ಟಣದ ಸುತ್ತಮುತ್ತಲೂ ಇರುವ ತ್ಯಾಜ್ಯ, ಖಾಲಿ ಜಾಗಗಳಲ್ಲಿ ಚಿಂದಿ ಆಯುವವರು ಇದ್ದಾರೆ. ಇವರ ಜತೆಯಲ್ಲಿ ಮಕ್ಕಳೂ ಇದ್ದಾರೆ.
ಚಿಂದಿ ಆಯುವವರ ಬದುಕು ಅವಮಾನಕರ ರೀತಿಯಲ್ಲಿ ಇದೆ. ಆರೋಗ್ಯದ ಕಡೆ ಗಮನ ಇಲ್ಲ. ಪಟ್ಟಣದಲ್ಲಿ 20ಕ್ಕೂ ಹೆಚ್ಚು ಮಂದಿ ಚಿಂದಿ ಆಯುವವರು ಇದ್ದಾರೆ. ಇವರೆಲ್ಲಾ ನೆರೆಯ ಆಂಧ್ರಪ್ರದೇಶ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಆಗಿದ್ದಾರೆ. ಚಿಂದಿ ಆಯುವ ಕುಟುಂಬಗಳು ಪಟ್ಟಣದ ಹೊರವಲಯದಲ್ಲಿ ಗಿಡ, ಮರಗಳ ಕೆಳಗೆ ಹಾಗೂ ಖಾಲಿ ನಿವೇಶನ ಜಾಗಗಳಲ್ಲಿ ಅಸಹನೀಯ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ, ಕೂಲಿ ಕೆಲಸ ಮಾಡಲು ಕೂಲಿ ಕೆಲಸ ನೀಡುತ್ತಿಲ್ಲ. ಜೀವನಕ್ಕೆ ಬೇರೆ ದಾರಿ ಇಲ್ಲದೇ ಚಿಂದಿ ಆಯುವ ಕೆಲಸ ಮಾಡುತ್ತಿದ್ದೇನೆ. ಚಿಂದಿ ಆಯ್ದು ಗುಜರಿಗೆ ಹಾಕಿದರೆ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದೇನೆ ಎಂದು ತೀಮಾಕಲಪಲ್ಲಿ ಗ್ರಾಮದ ನರಸಿಂಹಪ್ಪ ‘ಪ್ರಜಾವಾಣಿ’ ಯೊಂದಿಗೆ ಅಳಲು ತೋಡಿಕೊಂಡರು.
‘ಪಟ್ಟಣದಲ್ಲಿ ಚಿಂದಿ ಆಯುವವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.