ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ನೀರು

11 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
Published 19 ಮಾರ್ಚ್ 2024, 5:55 IST
Last Updated 19 ಮಾರ್ಚ್ 2024, 5:55 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು ಬರಗಾಲ ಘೋಷಣೆಯಾಗಿದೆ. ಬೇಸಿಗೆ ಕಾವು ದಿನೇ ದಿನೇ ಏರುತ್ತಿದೆ. ಕೆರೆ, ಕುಂಟೆ ಬರಿದಾಗುತ್ತಿದ್ದು, ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಬೇಸಿಗೆ ಆರಂಭದಲ್ಲಿಯೇ ತಾಲ್ಲೂಕಿನಲ್ಲಿ ಜನ, ಜಾನುವಾರುಗಳಿಗೆ ನೀರಿನ ಬವಣೆ ಎದುರಾಗಿದೆ.

ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಜಿಲ್ಲಾ ಪಂಚಾಯಿತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಗ್ರಾಮ ಪಂಚಾಯಿತಿ ಕೊಳವೆ ಬಾವಿ, ಬಾಡಿಗೆ ಆಧಾರದಲ್ಲಿ ಪಡೆದುಕೊಂಡಿರುವ ಖಾಸಗಿ ಕೊಳವೆ ಬಾವಿ ಮೂಲಕ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 402 ಗ್ರಾಮಗಳಿವೆ. 11 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಠಿಯಾಗಿದೆ. ಕಂಚಿನಾಯಕನಹಳ್ಳಿ, ವಡ್ಡಹಳ್ಳಿ, ಎ.ಗುಟ್ಟಹಳ್ಳಿ, ದಿನ್ನಮಿಂದಹಳ್ಳಿ, ಮುನುಗನಹಳ್ಳಿ, ಯಶವಂತಪುರ, ಸಂತೇಕಲ್ಲಹಳ್ಳಿ, ಮಲ್ಲಿಕಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಈ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಕೊಳವೆ ಬಾವಿಗಳಿಗೆ ತಿಂಗಳಿಗೆ ₹14ರಿಂದ ₹18 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಪ್ರಜಾವಾಣಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ 18 ಗ್ರಾಮಗಳಲ್ಲಿ ಕೊಳವೆ ಬಾವಿಗಳ ನೀರಿನ ಲಭ್ಯತೆ ಕಡಿಮೆಯಾಗಿದೆ. ಕೈವಾರದ ಬ್ಲಾಕ್ 1. ಬ್ಲಾಕ್ 2, ಬ್ಲಾಕ್ 3, ಕೆಂಪದೇನಹಳ್ಳಿ, ಅಮಿಟಗಾನಹಳ್ಳಿ, ಉಪ್ಪರಪೇಟೆ, ಕದಿರಾಪುರ, ಬಚ್ಚಪ್ಪನಹಳ್ಳಿ, ಕೊರುಕೋನಪ್ಪಲ್ಲಿ, ಪಾತಕೋಟೆ, ಅಮಿಟಹಳ್ಳಿ, ಕೋರ್ಲಪರ್ತಿ, ಮುರುಗಮಲ್ಲ, ಬಟ್ಲಹಳ್ಳಿ, ಶೆಟ್ಟಹಳ್ಳಿ, ಜಿ.ಕೋಡಿಹಳ್ಳಿ, ಕೃಷ್ಣಮ್ಮನ ಹೊಸಹಳ್ಳಿ, ಹುಸ್ಮಾನ್ ಪುರ, ಶಿಂಗನಹಳ್ಳಿ, ವೈ.ಕುರುಪ್ಪಲ್ಲಿ, ಯಗವಕೋಟೆ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಲಿದೆ.

ಇನ್ನೂ 47 ಗ್ರಾಮಗಳಲ್ಲಿ ಸಮಸ್ಯೆ ಉದ್ಭವವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಮಸ್ಯೆ ಗುರುತಿಸಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡುವ ಮಾಲೀಕರನ್ನು ಗುರುತಿಸಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ ದೊರೆಯುತ್ತಿರುವ ನೀರು ಸ್ಥಗಿತಗೊಂಡರೆ ತಕ್ಷಣದಿಂದಲೇ ಅವರು ನೀರು ಸರಬರಾಜು ಮಾಡುವಂತೆ ಮಾತುಕತೆ ನಡೆಸಲಾಗಿದೆ.

ನೀರಿನ ಸಮಸ್ಯೆ ನಿವಾರಣೆಗೆ ಹಣಕಾಸಿನ ತೊಂದರೆ ಎದುರಾಗಬಾರದು ಎಂದು ಟಾಸ್ಕ್‌ಫೋರ್ಸ್ ಸಮಿತಿಗೆ ₹50 ಲಕ್ಷ ಬಿಡುಗಡೆಯಾಗಿದೆ. ಬರಗಾಲದಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಿ ಸಮರ್ಪಕವಾಗಿ ನೀರು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತಿದೆ ಎಂದು ಆನಂದ್ ತಿಳಿಸಿದರು.

ನೀರಿನ ಸಮಸ್ಯೆ ಉಂಟಾಗದಂತೆ ಆಯಾ ಗ್ರಾಮ ಪಂಚಾಯಿತಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದಲೂ ಕಾಲ ಕಾಲಕ್ಕೆ ನೀರಿನ ಸಮಸ್ಯೆ ಕುರಿತು ಸ್ಪಂದನೆ ದೊರೆಯುತ್ತಿದೆ. ಪಿಡಿಒಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರು ಸರಬರಾಜು ಮಾಡಲು ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಮಾತುಕತೆ ಕಡೆಸಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಚಿಂತಾಮಣಿಗೆ ನೀರು ಪೂರೈಸುವ ಯೋಜನೆ ರೂಪಿಸಿರುವ ಭಕ್ತರಹಳ್ಳಿ ಅರಸೀಕೆರೆ
ಚಿಂತಾಮಣಿಗೆ ನೀರು ಪೂರೈಸುವ ಯೋಜನೆ ರೂಪಿಸಿರುವ ಭಕ್ತರಹಳ್ಳಿ ಅರಸೀಕೆರೆ

ನಿರೀಕ್ಷೆಗಿಂತ ವೇಗವಾಗಿ ನೀರಿನ ಸಮಸ್ಯೆ ಎದುರಾಗುತ್ತಿದೆ. ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಹಣದ ಕೊರತೆ ಇಲ್ಲ. -ಎಸ್.ಆನಂದ್ ತಾ.ಪಂ.ಕಾರ್ಯನಿರ್ವಹಣಾಧಿಕಾರಿ

ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲು ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ

-ಆರ್.ಲೋಕೇಶ್ ಎಇಇ ಗ್ರಾಮೀಣ ನೀರು ಸರಬರಾಜು ಇಲಾಖೆ ಚಿಂತಾಮಣಿ

ಬೇಸಿಗೆಯಲ್ಲಿ ನೀರು ಒದಗಿಸಲು ಅಧಿಕಾರಿಗಳು ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿದಂತೆ ಕೆಲಸ ಮಾಡಬೇಕು. ಕೊಳವೆಬಾವಿಗಳು ಮತ್ತು ಪಂಪ್ ಹಾಗೂ ಮೋಟಾರುಗಳ ದುರಸ್ತಿಗೆ ತಯಾರಾಗಿರಬೇಕು. ದೂರು ಬಂದ ಕೂಡಲೇ 24 ಗಂಟೆಗಳಲ್ಲಿ ದುರಸ್ತಿಗೊಳಿಸಬೇಕು

-ನಾಗರಾಜ್ ಗ್ರಾಮ ಪಂಚಾಯಿತಿ ಸದಸ್ಯ

ಕಳೆದ 2 ವರ್ಷ ಉತ್ತಮ ಮಳೆಯಾಗಿತ್ತು. ನೀರಿನ ಸಮಸ್ಯೆ ಇರಲಿಲ್ಲ. ಈ ವರ್ಷ ಮಳೆ ಕುಂಠಿತವಾಗಿ ಬೇಸಿಗೆಯ ಆರಂಭದಲ್ಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು

-ವಿ.ನರಸಿಂಹಪ್ಪ ಡಿಎಸ್‌ಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT