ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಲಕ್ಷ್ಮಿದೇವನಕೋಟೆ ಗ್ರಾಮದ ಸಮೀಪ ಬುಧವಾರ ರಾತ್ರಿ ಯುವಕರಿಬ್ಬರ ನಡುವೆ ನಡೆದ ಜಗಳವು ವಿಕೋಪಕ್ಕೆ ತಿರುಗಿ, ಒಬ್ಬ ಚಾಕುವಿನ ಇರಿತಕ್ಕೆ ಒಳಗಾಗಿ, ತೀವ್ರವಾಗಿ ಗಾಯಗೊಂಡಿದ್ದಾನೆ.
ಚಾಕುವಿನ ಇರಿತಕ್ಕೆ ಒಳಗಾದ ಯುವಕನನ್ನು ಶ್ರೀನಿವಾಸಪುರ ದಿನ್ನೆ ಗ್ರಾಮದ ಶಿವು ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ನರೇಶ್ ಚಾಕುವಿನಿದ ತಿವಿದ ಆರೋಪಿಯಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.
ಎದೆ ಮತ್ತು ಬಲಭಾಗದ ಹೊಟ್ಟೆಗೆ ತಿವಿತದ ಗಾಯಗಳಾಗಿದ್ದು, ಸಂತ್ರಸ್ತನನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿವು ಸಹೋದರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
‘ಶಿವು ಬುಧವಾರ ಕೂಲಿ ಕೆಲಸ ಮುಗಿಸಿಕೊಂಡು ಲಕ್ಷ್ಮಿದೇವನಕೋಟೆಯಿಂದ ಬರುತ್ತಿರುವಾಗ ದಾರಿಯಲ್ಲಿ ನರೇಶ್ ಮತ್ತು ಆತನ ಸ್ನೇಹಿತನೊಬ್ಬ ಸೇರಿ ನನ್ನ ತಮ್ಮನನ್ನು ಕೊಲೆ ಮಾಡಲು ಚಾಕುವಿನಿಂದ ತಿವಿದಿದ್ದಾರೆ. ನರೇಶ್ ಪತ್ನಿಯೊಂದಿಗೆ ನನ್ನ ತಮ್ಮ ಶಿವು ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನವೇ ಗಲಾಟೆಗೆ ಕಾರಣ’ ಎಂದು ಶಿವು ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.